ಮಧ್ಯಪ್ರದೇಶದ ಅನರ್ಹ ಬಿಜೆಪಿ ಶಾಸಕನ ದೋಷನಿರ್ಣಯಕ್ಕೆ ಹೈಕೋರ್ಟ್ ತಡೆ
ಭೋಪಾಲ,ನ.7: ಭೋಪಾಲದ ವಿಶೇಷ ನ್ಯಾಯಾಲಯವು ಈಗ ಅನರ್ಹಗೊಂಡಿರುವ ಬಿಜೆಪಿ ಶಾಸಕ ಪ್ರಹ್ಲಾದ ಲೋಧಿ ವಿರುದ್ಧದ ಕ್ರಿಮಿನಲ್ ಪ್ರಕರಣವೊಂದರಲ್ಲಿ ಘೋಷಿಸಿರುವ ದೋಷ ನಿರ್ಣಯ ತೀರ್ಪು ಮತ್ತು ಎರಡು ವರ್ಷಗಳ ಜೈಲು ಶಿಕ್ಷೆಗೆ ಮಧ್ಯಪ್ರದೇಶ ಉಚ್ಚ ನ್ಯಾಯಾಲಯವು ತಡೆಯಾಜ್ಞೆಯನ್ನು ನೀಡಿದೆ.
2014ರ ಹಲ್ಲೆ ಪ್ರಕರಣವೊಂದರಲ್ಲಿ ತನ್ನನ್ನು ದೋಷಿಯೆಂದು ಘೋಷಿಸಿದ್ದ ವಿಶೇಷ ನ್ಯಾಯಾಲಯದ ಅ.31ರ ತೀರ್ಪಿನ ವಿರುದ್ಧ ಲೋಧಿ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿಯನ್ನು ಸಲ್ಲಿಸಿದ್ದರು.
ರಾಜ್ಯ ವಿಧಾನಸಭೆಯ ಅಧ್ಯಕ್ಷರು ಲೋಧಿಯನ್ನು ಅವಸರದಲ್ಲಿ ಅನರ್ಹಗೊಳಿಸಿದ್ದಾರೆ ಎಂದು ಉಚ್ಚ ನ್ಯಾಯಾಲಯವು ತನ್ನ ಆದೇಶದಲ್ಲಿ ಹೇಳಿದೆ. 40,000 ರೂ.ಗಳ ಬಾಂಡ್ ಸಲ್ಲಿಸುವಂತೆ ಅದು ಲೋಧಿಯವರಿಗೆ ಸೂಚಿಸಿದೆ.
ಲೋಧಿ ಪನ್ನಾ ಜಿಲ್ಲೆಯ ಪವಾಯಿ ಶಾಸಕರಾಗಿದ್ದು,ಪನ್ನಾದಲ್ಲಿ ಅಕ್ರಮ ಮರಳುಗಾರಿಕೆಯನ್ನು ನಿಲ್ಲಿಸಲು ತೆರಳಿದ್ದ ಸರಕಾರಿ ಅಧಿಕಾರಿಗಳ ತಂಡದ ಮೇಲೆ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿದ್ದು,ವಿಶೇಷ ನ್ಯಾಯಾಲಯವು ಆರೋಪವನ್ನು ಎತ್ತಿ ಹಿಡಿದಿತ್ತು. ಎರಡು ದಿನಗಳ ಬಳಿಕ ಸ್ಪೀಕರ್ ನರ್ಮದಾ ಪ್ರಸಾದ ಪ್ರಜಾಪತಿ ಅವರು,ಕ್ರಿಮಿನಲ್ ಪ್ರಕರಣದಲ್ಲಿ ಎರಡು ವರ್ಷ ಮತ್ತು ಹೆಚ್ಚಿನ ಜೈಲುಶಿಕ್ಷೆಗೆ ಗುರಿಯಾದ ಶಾಸಕರ ಅನರ್ಹತೆಗೆ ಅವಕಾಶ ಕಲ್ಪಿಸಿರುವ 2013ರ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಲೋಧಿ ಅವರನ್ನು ವಿಧಾನಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿದ್ದರು ಮತ್ತು ಪವಾಯಿ ವಿಧಾನಸಭಾ ಕ್ಷೇತ್ರ ತೆರವಾಗಿದೆಯೆಂದು ಘೋಷಿಸಿದ್ದರು.