ಕಾರು ಗಾಜು ಜಖಂ ಪ್ರಕರಣ: ಏಳು ಯುವಕರ ಬಂಧನ
ಬೆಂಗಳೂರು, ನ.8: ಕಾರುಗಳ ಗಾಜುಗಳಿಗೆ ಕಲ್ಲು ತೂರಿ ಜಖಂಗೊಳಿಸಿದ ಆರೋಪ ಪ್ರಕರಣ ಸಂಬಂಧ ಏಳು ಮಂದಿ ಯುವಕರನ್ನು ವಿಜಯನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ನಗರದ ನಿವಾಸಿಗಳಾದ ಯಶ್ವಂತ್(20), ದರ್ಶನ್(19), ನಿತಿನ್(18), ಕನಕನಗರದ ಕಿರಣ್ ರೆಡ್ಡಿ(26), ಮುತ್ತು (22), ಸಿ.ರಾಜು(20), ಬಾಲಾಜಿ ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ಪೈಕಿ ಯಶ್ವಂತ್, ದರ್ಶನ್, ನಿತಿನ್ ಎಂಬುವರು ನ.6 ರಂದು ಮಧ್ಯರಾತ್ರಿ ಇಲ್ಲಿನ ಪಟ್ಟೇಗಾರ ಪಾಳ್ಯದ ಸಂಪಿಗೆ ಬಡಾವಣೆಯ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರುಗಳಿಗೆ ಕಲ್ಲು ತೂರಾಟ ನಡೆಸಿ ಜಖಂಗೊಳಿಸಿ ಪರಾರಿಯಾಗಿದ್ದರು ಎನ್ನಲಾಗಿದೆ.
ಆರೋಪಿಗಳು ತಮ್ಮ ಪ್ರದೇಶದಲ್ಲಿ ಜನರಲ್ಲಿ ಭಯಭೀತಿ ಸೃಷ್ಟಿಸಲು ಈ ಕೃತ್ಯ ನಡೆಸಿರುವುದು ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Next Story