ಪುತ್ತೂರು: ಮಸೀದಿಗೆ ಹೋಗುತ್ತಿದ್ದ ವ್ಯಕ್ತಿಗೆ ತಲವಾರಿನಿಂದ ಹಲ್ಲೆಗೆ ಯತ್ನ; ಆರೋಪ
ಪುತ್ತೂರು: ಮಸೀದಿಗೆ ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ತಲವಾರಿನಿಂದ ಹಲ್ಲೆಗೆ ಯತ್ನಿಸಿದ ಘಟನೆ ಮಂಗಳವಾರ ನಸುಕಿನ ವೇಳೆಯಲ್ಲಿ ಪುತ್ತೂರು ತಾಲೂಕಿನ ಸಾಲ್ಮರ ಎಂಬಲ್ಲಿ ನಡೆದಿದೆ .
ಸಾಲ್ಮರ ನಿವಾಸಿ ಹಂಝ ಎಂಬವರು ತನ್ನ ಬೈಕ್ನಲ್ಲಿ ಬೆಳಗ್ಗಿನ ಜಾವ ಸುಮಾರು 5 ಗಂಟೆಯ ವೇಳೆಗೆ ನಗರದ ಎಪಿಎಂಸಿ ಬಳಿಯಲ್ಲಿರುವ ಮಸೀದಿಗೆ ನಮಾಝ್ಗೆಂದು ಹೋಗುತ್ತಿದ್ದ ವೇಳೆಯಲ್ಲಿ ಸಾಲ್ಮರದ ಆಶೀಕ್ ರೆಸ್ಟೋರೆಂಟ್ ಬಳಿಯಲ್ಲಿ ನಿಲ್ಲಿಸಲಾಗಿದ್ದ ಕಾರೊಂದರಿಮದ ಇಳಿದು ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ತಲವಾರು ಬೀಸಿ ಹಂಝ ಅವರ ಮೇಲೆ ಹಲ್ಲೆಗೆ ಯತ್ನಿಸಿದ್ದರು ಎಂದು ಆರೋಪಿಸಲಾಗಿದೆ. ಈ ಸಂದರ್ಭದಲ್ಲಿ ಹಲ್ಲೆಯಿಂದ ತಪ್ಪಿಸಿಕೊಂಡ ಹಂಝ ಅವರು ಬೈಕ್ ತಿರುಗಿಸಿ ಸಾಲ್ಮರ ಸೈಯದ್ಮಲೆ ಮಸೀದಿಗೆ ತೆರಳಿ ಅಲ್ಲಿ ಮಾಹಿತಿ ನೀಡಿದ್ದರು. ಮಾಹಿತಿ ಅರಿತು ಸ್ಥಳೀಯರು ಹಲ್ಲೆ ಯತ್ನ ನಡೆಸಲಾದ ಸ್ಥಳಕ್ಕೆ ಆಗಮಿಸಿದಾಗ ಕಾರು ಸಮೇತ ಆರೋಪಿಗಳು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಘಟನೆ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ದೂರಿಗೆ ಸಂಬಂಧಿಸಿ ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಆಗಮಿಸಿ ಸ್ಥಳೀಯ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದ್ದಾರೆ.