ನೈತಿಕ ಹೊಣೆ ಹೊತ್ತು ಯಡಿಯೂರಪ್ಪ ರಾಜೀನಾಮೆ ನೀಡಲಿ: ದಿನೇಶ್ ಗುಂಡೂರಾವ್
ಶಾಸಕರ ಅನರ್ಹತೆ ಪ್ರಕರಣ: ಸುಪ್ರೀಂಕೋರ್ಟು ತೀರ್ಪು ಹಿನ್ನೆಲೆ
ರಾಯಚೂರು, ನ.13: ಶಾಸಕರ ಅನರ್ಹತೆಗೆ ಸಂಬಂಧಿಸಿ ಸ್ಪೀಕರ್ ಆದೇಶವನ್ನು ಸುಪ್ರೀಂಕೋರ್ಟು ಎತ್ತಿ ಹಿಡಿದಿರುವುದರಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಒತ್ತಾಯಿಸಿದ್ದಾರೆ.
ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂಕೋರ್ಟು ಸ್ಪೀಕರ್ ಆದೇಶ ಎತ್ತಿ ಹಿಡಿದಿದ್ದು, ನೈತಿಕತೆಗೆ ಗೆಲುವು. ತೀರ್ಪನ್ನು ಕಾಂಗ್ರೆಸ್ ಪಕ್ಷ ಸ್ವಾಗತಿಸುತ್ತದೆ ಎಂದರು.
ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಸರಕಾರಕ್ಕೆ ಅಧಿಕಾರದಲ್ಲಿ ಉಳಿಯುವ ನೈತಿಕತೆಯಿಲ್ಲ. ಸ್ಪೀಕರ್ ನಿರ್ಧಾರ ಸರಿ ಎಂಬುದನ್ನು ತೀರ್ಪು ಬಯಲುಗೊಳಿಸಿದೆ. ಕುದುರೆ ವ್ಯಾಪಾರ ನಡೆದಿರುವುದು ಸಾಬೀತಾಗಿದೆ. ಶೀಘ್ರ ರಾಷ್ಟ್ರಪತಿ ಭೇಟಿ ಮಾಡಿ ರಾಜ್ಯ ಸರಕಾರದ ವಿರುದ್ಧ ದೂರು ನೀಡಲಾಗುವುದು. ಸರಕಾರವನ್ನು ವಜಾಗೊಳಿಸಲು ಒತ್ತಾಯ ಮಾಡಲು ನಿರ್ಧರಿಸಲಾಗಿದೆ ಎಂದರು.
ಬಿಜೆಪಿಗೆ ನೈತಿಕತೆಯಿದ್ದರೆ ಉಪ ಚುನಾವಣೆಯಲ್ಲಿ ಅನರ್ಹ ಶಾಸಕರಿಗೆ ಸ್ಪರ್ಧೆಗೆ ಅವಕಾಶ ನೀಡಬಾರದು ಎಂದವರು ಒತ್ತಾಯಿಸಿದರು.