ಅನರ್ಹರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಪ್ರತಿಕ್ರಿಯಿಸಿದ್ದು ಹೀಗೆ...
ಬೆಂಗಳೂರು, ನ. 13: ಸುಪ್ರೀಂ ಕೋರ್ಟ್ ತೀರ್ಪಿನಿಂದ ನಾನು ಭಾಗಶಃ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದೇನೆ. ಅನರ್ಹ ಶಾಸಕ ಎನ್ನಿಸಿಕೊಳ್ಳುವುದು ಗೌರವದ ಸಂಕೇತ ಅಲ್ಲ. ಅವರಿಗೆ ಪುನಃ ಜನರ ಮುಂದೆ ನಿಲ್ಲಲು(ಚುನಾವಣೆ ಸ್ಪರ್ಧೆ) ಅವಕಾಶ ಕೊಡಬಾರದಿತ್ತು ಎಂದು ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಬುಧವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಇತ್ತೀಚೆಗೆ ನಡೆದ ಬಹುತೇಕ ಚುನಾವಣೆಗಳಲ್ಲಿ ಪಕ್ಷಾಂತರಿಗಳನ್ನು ಮತದಾರರರು ತಿರಸ್ಕರಿಸಿದ್ದಾರೆ. ಇನ್ನು ಅನರ್ಹರ ವಿಚಾರ ಏನಾಗುತ್ತೋ ಉಪಚುನಾವಣೆ ಬಳಿಕ ಗೊತ್ತಾಗಲಿದೆ ಎಂದು ಎಚ್ಚರಿಸಿದರು.
ಸುಪ್ರೀಂ ಕೋರ್ಟ್ ತೀರ್ಪನ್ನು ನಾನು ಗೌರವಿಸುತ್ತೇನೆ. ಪ್ರಕರಣವನ್ನು ನ್ಯಾಯಮೂರ್ತಿಗಳು ಹೇಗೆ, ಯಾವ ದೃಷ್ಟಿಕೋನದಿಂದ ವಿಶ್ಲೇಷಿಸಿದ್ದಾರೆ ಎನ್ನುವ ಬಗ್ಗೆ ನನಗೆ ಸ್ಪಷ್ಪತೆ ಇಲ್ಲ ಎಂದ ರಮೇಶ್ ಕುಮಾರ್, ರಾಜೀನಾಮೆ ಒಂದು ಗೌರವಯುತವಾದ ಪ್ರಕ್ರಿಯೆ, ಅನರ್ಹತೆ ಒಂದು ಶಿಕ್ಷೆ ಎಂದರು.
ರಾಜೀನಾಮೆ ಮತ್ತು ಅನರ್ಹತೆಯನ್ನು ಒಂದೇ ದೃಷ್ಟಿಕೋನದಿಂದ ನೋಡಲು ಸಾಧ್ಯವಿಲ್ಲ. ಅನರ್ಹಗೊಳಿಸಿದ್ದು ಸರಿಯಿದೆ ಎಂದೇ ಸುಪ್ರೀಂಕೋರ್ಟ್ ಹೇಳಿದೆ ಎಂದ ಅವರು, ಪಕ್ಷಾಂತರ ನಿಷೇಧ ಕಾಯ್ದೆಗೆ ಆಧಾರವಾಗಿರುವ ಸಂವಿಧಾನದ 10ನೆ ಪರಿಚ್ಛೇದದಲ್ಲಿ ಸದನದ ಉಳಿದ ಅವಧಿಗೆ ಎನ್ನುವ ಪದಗಳ ಉಲ್ಲೇಖವಿದೆ. ಈ ದೃಷ್ಟಿಯಿಂದ ನೋಡಿದರೆ ಕರ್ನಾಟಕ ವಿಧಾನಸಭೆಯ ಅವಧಿ 2023ರ ವರೆಗೆ ಇದೆ. ಈ ಹಿನ್ನೆಲೆಯಲ್ಲಿ ನಾನು ಅನರ್ಹತೆಯ ತೀರ್ಮಾನ ತೆಗೆದುಕೊಂಡಿದ್ದೆ ಎಂದು ಸ್ಪಷ್ಟಪಡಿಸಿದರು.
ಅನರ್ಹ ಶಾಸಕರ ಪ್ರಕರಣದಲ್ಲಿ ನಾನು ಅರ್ಜಿದಾರನೂ ಅಲ್ಲ, ಪ್ರತಿವಾದಿಯೂ ಅಲ್ಲ. ಮೇಲ್ಮನವಿಯನ್ನೂ ನಾನು ಸಲ್ಲಿಸುವುದಿಲ್ಲ. ಕಾಂಗ್ರೆಸ್ ಪಕ್ಷ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ರಮೇಶ್ ಕುಮಾರ್, ಪ್ರಧಾನಿ ಮೋದಿಯವರು ಚುನಾವಣಾ ಸುಧಾರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.