ಪಾಕಿಸ್ತಾನದ ಡಿಎನ್ಎಯಲ್ಲಿ ಹಾಸುಹೊಕ್ಕಾಗಿರುವ ಭಯೋತ್ಪಾದನೆ: ಯುನೆಸ್ಕೊ ಸಭೆಯಲ್ಲಿ ಭಾರತ
ಪ್ಯಾರಿಸ್, ನ. 15: ಭಯೋತ್ಪಾದನೆಯು ಪಾಕಿಸ್ತಾನದ ಡಿಎನ್ಎಯಲ್ಲಿ ಹಾಸುಹೊಕ್ಕಾಗಿದೆ ಎಂದು ಫ್ರಾನ್ಸ್ನಲ್ಲಿ ಗುರುವಾರ ನಡೆದ ವಿಶ್ವಸಂಸ್ಥೆಯ ಸಭೆಯಲ್ಲಿ ಭಾರತ ಹೇಳಿದೆ ಹಾಗೂ ಪಾಕಿಸ್ತಾನದ ‘ವಿವೇಚನಾರಹಿತ ವರ್ತನೆ’ಯಿಂದಾಗಿ ಆ ದೇಶವು ವಿಫಲ ರಾಷ್ಟ್ರವಾಗುವ ನಿಟ್ಟಿನಲ್ಲಿ ಸಾಗುತ್ತಿದೆ ಎಂದಿದೆ.
‘‘ಆ ದೇಶವು ಕತ್ತಲೆಯ ಎಲ್ಲ ಬಣ್ಣಗಳನ್ನು ಹೊಂದಿದೆ’’ ಎಂದು ಫ್ರಾನ್ಸ್ ರಾಜಧಾನಿ ಪ್ಯಾರಿಸ್ನಲ್ಲಿ ನಡೆದ ಯುನೆಸ್ಕೊ ಮಹಾ ಸಭೆಯಲ್ಲಿ ಭಾರತ ಅಭಿಪ್ರಾಯಪಟ್ಟಿದೆ.
‘‘ಪಾಕಿಸ್ತಾನದ ವಿವೇಚನಾರಹಿತ ವರ್ತನೆಯಿಂದಾಗಿ ಆ ದೇಶವು ವಿನಾಶದ ಅಂಚಿನಲ್ಲಿದೆ. ಅದರ ಆರ್ಥಿಕತೆ ದುರ್ಬಲವಾಗಿದೆ, ಸಮಾಜದ ಮೇಲೆ ತೀವ್ರವಾದವನ್ನು ಹೇರಲಾಗಿದೆ ಹಾಗೂ ಭಯೋತ್ಪಾದನೆಯು ಅದರ ಡಿಎನ್ಎಯಲ್ಲಿ ಹಾಸುಹೊಕ್ಕಾಗಿದೆ’’ ಎಂದು ಯುನೆಸ್ಕೊ ಸಭೆಯಲ್ಲಿ ಭಾರತೀಯ ನಿಯೋಗದ ನೇತೃತ್ವ ವಹಿಸಿದ ಅನನ್ಯಾ ಅಗರ್ವಾಲ್ ಹೇಳಿದರು.
‘‘ಪಾಕಿಸ್ತಾನವು ಕತ್ತಲೆಯ ಎಲ್ಲ ಬಣ್ಣಗಳಿಗೆ ತವರಾಗಿದೆ. ಅಲ್ಲಿ ತೀವ್ರವಾದಿ ಸಿದ್ಧಾಂತಗಳಿವೆ ಹಾಗೂ ಭಯೋತ್ಪಾದನೆಯನ್ನು ಅದರ ಕರಾಳ ರೂಪದಲ್ಲಿ ತೋರಿಸಲಾಗುತ್ತಿದೆ’’ ಎಂದು ಅವರು ನುಡಿದರು.
‘‘ಭಾರತದ ವಿರುದ್ಧ ವಿಷ ಕಾರಲು ಪಾಕಿಸ್ತಾನವು ಯುನೆಸ್ಕೊವನ್ನು ದುರ್ಬಳಕೆ ಮಾಡುವುದನ್ನು ಹಾಗೂ ಅದನ್ನು ರಾಜಕೀಕರಣಗೊಳಿಸುವುದನ್ನು ನಾವು ಖಂಡಿಸುತ್ತೇವೆ’’ ಎಂದರು.
2018ರ ದುರ್ಬಲ ರಾಷ್ಟ್ರಗಳ ಪಟ್ಟಿಯಲ್ಲಿ ಪಾಕಿಸ್ತಾನವು 14ನೇ ಸ್ಥಾನವನ್ನು ಹೊಂದಿತ್ತು ಎಂದು ಅನನ್ಯಾ ಅಗರ್ವಾಲ್ ನುಡಿದರು.
“ಬಹಿರಂಗವಾಗಿ ಪರಮಾಣು ಯುದ್ಧದ ಬೆದರಿಕೆ ಹಾಕುವ ನಾಯಕರ ದೇಶ”
‘‘ಬಹಿರಂಗವಾಗಿ ಪರಮಾಣು ಯುದ್ಧದ ಬೆದರಿಕೆ ಹಾಕಲು ಹಾಗೂ ಇತರ ದೇಶಗಳ ವಿರುದ್ಧ ಸಶಸ್ತ್ರ ಸಂಘರ್ಷಕ್ಕೆ ಕರೆ ನೀಡಲು ವಿಶ್ವಸಂಸ್ಥೆಯ ವೇದಿಕೆಯನ್ನು ಪಾಕಿಸ್ತಾನದ ನಾಯಕರು ಬಳಸುತ್ತಾರೆ’’ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಸೆಪ್ಟಂಬರ್ನಲ್ಲಿ ನಡೆದ ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಮಾಡಿದ ಭಾಷಣವನ್ನು ಉಲ್ಲೇಖಿಸುತ್ತಾ ಭಾರತೀಯ ನಿಯೋಗದ ಮುಖ್ಯಸ್ಥೆ ಅನನ್ಯಾ ಅಗರ್ವಾಲ್ ಹೇಳಿದರು.