ಐಟಿ-ಈಡಿಯಿಂದ ಬಚಾವಾಗಲು ಎಂಟಿಬಿ ಬಿಜೆಪಿ ಸೇರ್ಪಡೆ: ಶರತ್ ಬಚ್ಚೇಗೌಡ
ಬೆಂಗಳೂರು, ನ.15: ಎಂಟಿಬಿ ನಾಗರಾಜ್ಗೆ ಕಾಂಗ್ರೆಸ್ ಪಕ್ಷ ಎಲ್ಲ ರೀತಿಯ ಅಧಿಕಾರವನ್ನು ಕೊಟ್ಟಿತ್ತು. ಆದರೆ, ಆದಾಯ ತೆರಿಗೆ(ಐಟಿ) ಇಲಾಖೆ ಹಾಗೂ ಜಾರಿ ನಿರ್ದೇಶನಾಲಯ(ಈಡಿ)ದಿಂದ ಬಚಾವಾಗಲು ಬಿಜೆಪಿ ಸೇರ್ಪಡೆಯಾಗಿದ್ದಾರೆ ಎಂದು ಹೊಸಕೋಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಶರತ್ ಬಚ್ಚೇಗೌಡ ಆರೋಪಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಎಂಟಿಬಿ ನಾಗರಾಜ್ ಒಬ್ಬ ಮೋಸಗಾರ, ಮನೆ ಮುರುಕ ಎಂದು ನಮ್ಮ ಕ್ಷೇತ್ರದಲ್ಲಿ ಜನ ಮಾತನಾಡಿಕೊಳ್ಳುತ್ತಿದ್ದರು. ಈತನಿಂದ ನಮ್ಮ ಕುಟುಂಬದ ಪರಿಸ್ಥಿತಿಯೂ ಬಿಗಡಾಯಿಸಿದೆ ಎಂದು ದೂರಿದರು.
ಎಂಟಿಬಿ ನಾಗರಾಜ್ ತಮ್ಮ ಕುತಂತ್ರದಿಂದ ಅಪ್ಪ-ಮಗನನ್ನು ದೂರ ಮಾಡಿದ್ದಾರೆ. ನಮ್ಮ ಕುಟುಂಬದಲ್ಲಿ ಒಡಕು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಮ್ಮನ್ನೆ ಬಿಡದ ಈ ವ್ಯಕ್ತಿ, ಇನ್ನು ಜನಸಾಮಾನ್ಯರನ್ನು ಬಿಡುತ್ತಾರೆಯೇ? ಒಡಹುಟ್ಟಿದ ಅಣ್ಣ-ತಮ್ಮಂದಿರನ್ನು ದಾಯಾದಿಗಳನ್ನಾಗಿಸುತ್ತಾರೆ ಎಂದು ಶರತ್ ಬಚ್ಚೇಗೌಡ ಕಿಡಿಗಾರಿದರು.