ಬೈಂದೂರು: ಕೈಯಿಂದ ಜಾರಿದ ಮೊಬೈಲ್ ಹಿಡಿಯಲು ಹೋಗಿ ಬಾವಿಗೆ ಬಿದ್ದು ಮಹಿಳೆ ಮೃತ್ಯು
ಬೈಂದೂರು, ನ.15: ಕೈಯಿಂದ ಜಾರಿದ ಮೊಬೈಲ್ ಹಿಡಿಯಲು ಹೋದ ಮಹಿಳೆಯೊಬ್ಬರು ಅಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಗುರುವಾರ ರಾತ್ರಿ ಹೊಸ್ಕೋಟೆ ಬಾಳಿನಬೆಟ್ಟು ಎಂಬಲ್ಲಿ ನಡೆದಿದೆ.
ಮೃತರನ್ನು ಬಾಳಿನಬೆಟ್ಟು ನಿವಾಸಿ ಅಣ್ಣಪ್ಪ ದೇವಾಡಿಗ ಎಂಬವರ ಮಗಳು ಮೂಕಾಂಬು (33) ಎಂದು ಗುರುತಿಸಲಾಗಿದೆ. ಇವರು ಬೆಂಗಳೂರಿನಲ್ಲಿರುವ ತಮ್ಮ ಸತೀಶನೊಂದಿಗೆ ಮನೆಯ ಬಾವಿಯ ಬಳಿ ಮೊಬೈಲ್ನಲ್ಲಿ ಮಾತನಾಡುತ್ತಿರುವಾಗ ಆಕೆಯ ಅಕ್ಕ ಗಿರಿಜಾ, ಮೊಬೈಲ್ನ್ನು ಪಡೆದುಕೊಂಡು ಸತೀಶನೊಂದಿಗೆ ಮಾತನಾಡುತ್ತಿದ್ದರು.
ಈ ವೇಳೆ ಮೂಕಾಂಬು ಗಿರಿಜಾಳ ಕೈಯಿಂದ ಮೊಬೈಲ್ ಕಸಿದಿದ್ದು, ಆಗ ಗಿರಿಜಾಳ ಕೈಯಲ್ಲಿದ್ದ ಮೊಬೈಲ್ ಜಾರಿ ಆವರಣವಿಲ್ಲದ ಬಾವಿಗೆ ಬೀಳುತ್ತಿರುವಾಗ ಮೊಬೈಲ್ ಹಿಡಿಯಲು ಹೋದ ಮೂಕಾಂಬು ಆಯತಪ್ಪಿ ಕಾಲು ಜಾರಿ ಬಾವಿಗೆ ಬಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story