ಹೋರಾಟಗಾರ ಅಬ್ದುಲ್ ಜಬ್ಬಾರ್ ನಿಧನಕ್ಕೆ ವೈದ್ಯರ ನಿರ್ಲಕ್ಷ್ಯ ಕಾರಣ: ಸಹೋದರ ಆರೋಪ
ಭೋಪಾಲ್ ವಿಷಾನಿಲ ದುರಂತ
ಭೋಪಾಲ್, ನ. 16: ಭೋಪಾಲ್ ವಿಷಾನಿಲ ದುರಂತದ ಸಂತ್ರಸ್ತರ ಪರವಾಗಿ ನಡೆಸಿದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಅಬ್ದುಲ್ ಜಬ್ಬಾರ್ (62) ಅವರು ಗುರುವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಆದರೆ, ಅವರಿಗೆ ಭೋಪಾಲ್ ಮೆಮೋರಿಯಲ್ ಹಾಸ್ಟಿಟಲ್ ಆ್ಯಂಡ್ ರಿಸರ್ಚ್ ಸೆಂಟರ್ (ಬಿಎಂಎಚ್ಆರ್ಸಿ) ಸಮರ್ಪಕವಾಗಿ ಚಿಕಿತ್ಸೆ ನೀಡಿಲ್ಲ ಹಾಗೂ ಅವರ ರೋಗದ ಬಗ್ಗೆ ವೈದ್ಯರು ಕುಟುಂಬಕ್ಕೆ ಮಾಹಿತಿ ನೀಡಿಲ್ಲ ಎಂದು ಅಬ್ದುಲ್ ಜಬ್ಬಾರ್ ಸಹೋದರ ಅಬ್ದುಲ್ ಶಮೀಮ್ ಶುಕ್ರವಾರ ಆರೋಪಿಸಿದ್ದಾರೆ.
‘‘ಬಿಎಂಎಚ್ಆರ್ಸಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿದ್ದರೂ ವಿವಿಧ ಪರೀಕ್ಷೆಗಳಿಗಾಗಿ ಅವರು (ವೈದ್ಯರು) ನನ್ನ ಸಹೋದರನನ್ನು ವಿವಿಧ ಆಸ್ಪತ್ರೆಗೆ ಕಳುಹಿಸಿದರು. ಬಿಕ್ಕಟ್ಟಿನ ಸಂದರ್ಭದಲ್ಲಿ ನಮಗೆ ನೆರವು ನೀಡಲು ಯಾರೊಬ್ಬರೂ ಮುಂದೆ ಬರಲಿಲ್ಲ. ಅವರನ್ನು ಖಾಸಗಿ ಆಸ್ಪತ್ರೆಗೆ ವರ್ಗಾಯಿಸುವಾಗಲೂ ತುಂಬಾ ವಿಳಂಬವಾಗಿದೆ’’ ಎಂದು ಶಮೀಮ್ ಹೇಳಿದ್ದಾರೆ.
1984ರ ಭೋಪಾಲ್ ಅನಿಲ ದುರಂತದಲ್ಲಿ ಅಬ್ದುಲ್ ಜಬ್ಬಾರ್ ತನ್ನ ಹೆತ್ತವರನ್ನು ಕಳೆದುಕೊಂಡರು. ಅನಂತರ ಭೋಪಾಲ್ ವಿಷಾನಿಲ ದುರಂತದಲ್ಲಿ ಸಂತ್ರಸ್ತರಾದವರ ಪರವಾಗಿ ಕಳೆದ 35 ವರ್ಷಗಳಿಂದ ದಣಿವರಿಯದೆ ಹೋರಾಟ ನಡೆಸಿದ್ದರು.
ಉತ್ತಮ ಚಿಕಿತ್ಸೆ ಒದಗಿಸಲು ವಿಮಾನದಲ್ಲಿ ಮುಂಬೈಗೆ ವರ್ಗಾಯಿಸಲು ರಾಜ್ಯ ಸರಕಾರ ವ್ಯವಸ್ಥೆ ಮಾಡುವುದಕ್ಕಿಂತ ಗಂಟೆಗೆ ಮುನ್ನ ಅಬ್ದುಲ್ ಜಬ್ಬಾರ್ ಅವರು ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಅವರ ಅಂತ್ಯಕ್ರಿಯೆ ಭೋಪಾಲ್ ರೈಲ್ವೆ ನಿಲ್ದಾಣದ ಸಮೀಪ ಇರುವ ಸ್ಮಶಾನದಲ್ಲಿ ಶುಕ್ರವಾರ ಅಪರಾಹ್ನ ನಡೆಯಿತು. ಅಂತ್ಯಕ್ರಿಯೆಯಲ್ಲಿ ಸಾರ್ವಜನಿಕ ಸಂಪರ್ಕ ಸಚಿವ ಪಿ.ಸಿ. ಶರ್ಮಾ, ಕೇಂದ್ರದ ಮಾಜಿ ಸಚಿವ ಸುರೇಶ್ ಪಚೌರಿ ಸೇರಿದಂತೆ ಗಣ್ಯರು ಹಾಗೂ ಇತರರು ಪಾಲ್ಗೊಂಡಿದ್ದರು.
ಅವರ ಒಂದು ಕಾಲಿಗೆ ಗ್ಯಾಂಗ್ರಿನ್ ಆಗಿತ್ತು. ಅಲ್ಲದೆ ಅವರು ಹೃದ್ರೋಗದಿಂದ ಬಳಲುತ್ತಿದ್ದರು ಎಂದು ಅಬ್ದುಲ್ ಜಬ್ಬಾರ್ ಅವರ ಕುಟುಂಬದ ಸದಸ್ಯರು ಹೇಳಿದ್ದಾರೆ. ಆದರೆ, ಅಬ್ದುಲ್ ಜಬ್ಬಾರ್ ಅವರಿಗೆ ಚಿಕಿತ್ಸೆ ನೀಡುವಲ್ಲಿ ನಿರ್ಲಕ್ಷ ವಹಿಸಲಾಗಿದೆ ಎಂಬ ಆರೋಪವನ್ನು ಬಿಎಂಎಚ್ಆರ್ಸಿ ವಕ್ತಾರ ನಿರಾಕರಿಸಿದ್ದಾರೆ.
ಆಸ್ಪತ್ರೆ ಅವರ ಚಿಕಿತ್ಸೆಯಲ್ಲಿ ಯಾವುದೇ ನಿರ್ಲಕ್ಷ ವಹಿಸಿಲ್ಲ. ಅವರು ಗ್ಯಾಂಗ್ರಿನ್ ಹಾಗೂ ಹೃದ್ರೋಗದಿಂದ ಬಳಲುತ್ತಿದ್ದರು. ಆದರೆ, ಇವೆರಡೂ ಶಸ್ತ್ರಚಿಕಿತ್ಸೆಯನ್ನು ಒಂದೇ ಬಾರಿ ಮಾಡಲು ಸಾಧ್ಯವಿರಲಿಲ್ಲ. ತೆರೆದ ಹೃದಯದ ಶಸ್ತ್ರಚಿಕಿತ್ಸೆ ನಡೆಸುವಂತೆ ಅವರಿಗೆ 8 ತಿಂಗಳ ಹಿಂದೆಯೇ ಸಲಹೆ ನೀಡಲಾಗಿತ್ತು ಎಂದು ವಕ್ತಾರ ತಿಳಿಸಿದ್ದಾರೆ.
ಜಬ್ಬಾರ್ ಅವರು ಭೋಪಾಲ ವಿಷಾನಿಲಯ ಸಂತ್ರಸ್ತರಿಗೆ ಪರಿಹಾರ, ಸೌಲಭ್ಯಕ್ಕಾಗಿ ಹೋರಾಟ ನಡೆಸಿದ್ದಾರೆ. ಅಲ್ಲದೆ, 3500 ಜನರ ಮೃತಪಟ್ಟ (ಸರಕಾರದ ದಾಖಲೆ ಪ್ರಕಾರ) ಹಾಗೂ ಸಾವಿರಾರು ಜನರು ಸಂತ್ರಸ್ತರಾದ ಮೀಥೈಲ್ ಐಸೋನೇಟ್ ವಿಷಾನಿಲ ಸೋರಿಕೆಗೆ ಹೊಣೆಗಾರರಾದ ಯೂನಿಯನ್ ಕಾರ್ಬೈಡ್ ಸ್ಥಾವರದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನು ಶಿಕ್ಷಿಸಲು ನಡೆಸಿದ ಹಲವು ಕಾನೂನು ಹೋರಾಟದ ಮುಂದಾಳತ್ವವನ್ನು ಕೂಡ ಅವರು ವಹಿಸಿದ್ದರು.