ಕಾಶ್ಮೀರದಲ್ಲಿ 'ಅತ್ಯಾಚಾರಕ್ಕೆ ಅತ್ಯಾಚಾರ' ಹೇಳಿಕೆ: ಭಾರೀ ವಿರೋಧದ ನಂತರ ಕ್ಷಮೆಯಾಚಿಸಿದ ನಿವೃತ್ತ ಸೇನಾಧಿಕಾರಿ
Photo: @airnewsalerts
ಹೊಸದಿಲ್ಲಿ: ಕಾಶ್ಮೀರಿ ಪಂಡಿತರ ಮೇಲೆ ನಡೆದ ದೌರ್ಜನ್ಯಗಳಿಗೆ ಪ್ರತೀಕಾರವಾಗಿ `ಸಾವಿಗೆ ಸಾವು, ಅತ್ಯಾಚಾರಕ್ಕೆ ಅತ್ಯಾಚಾರ' ನಡೆಯಬೇಕೆಂದು ಟಿವಿ ಚರ್ಚಾ ಕಾರ್ಯಕ್ರಮವೊಂದರಲ್ಲಿ ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದ ನಿವೃತ್ತ ಸೇನಾಧಿಕಾರಿ ಮೇಜರ್ ಜನರಲ್ ಎಸ್.ಪಿ. ಸಿನ್ಹಾ ಕ್ಷಮೆ ಯಾಚಿಸಿದ್ದಾರೆ.
'ಟಿವಿ9 ಭಾರತ್ ವರ್ಷ್' ಸುದ್ದಿ ವಾಹಿನಿಗೆ ಪತ್ರವೊಂದನ್ನು ಬರೆದು ಅದರ ಒಂದು ಪ್ರತಿಯನ್ನು ಸಾರ್ವಜನಿಕ ಮಾಹಿತಿ ಇಲಾಖೆಯ ಹೆಚ್ಚುವರಿ ಮಹಾನಿರ್ದೇಶಕರಿಗೂ ಕಳುಹಿಸಿರುವ ಸಿನ್ಹಾ ತಮ್ಮ ಹೇಳಿಕೆಗೆ ವಿಷಾದಿಸಿ ಕ್ಷಮೆ ಕೋರಿದ್ದಾರೆ.
"ಚರ್ಚೆಯ ವೇಳೆ ಹಾಜರಿದ್ದ ಕಾಶ್ಮೀರಿ ಕುಟುಂಬಗಳ ಯಾತನಾಮಯ ಕಥೆಗಳನ್ನು ಕೇಳಿ ನನ್ನ ಮನಸ್ಸು ಕರಗಿ ಹೋಗಿ ವಿಪ್ಲವವಾಗಿತ್ತು. ಇಂತಹ ಮನಃಸ್ಥಿತಿಯಲ್ಲಿ ಅನಪೇಕ್ಷಿತ ಹೇಳಿಕೆ ನೀಡಿದ್ದೆ'' ಎಂದು ತಮ್ಮ ಪತ್ರದಲ್ಲಿ ನಿವೃತ್ತ ಮೇಜರ್ ಜನರಲ್ ಸಿನ್ಹಾ ಬರೆದಿದ್ದಾರೆ.
ಟಿವಿ ಶೋ ಸಂದರ್ಭ ಸಿನ್ಹಾ ಹೇಳಿಕೆಯನ್ನು ಹಲವಾರು ಮಾಜಿ ಸೇನಾಧಿಕಾರಿಗಳು ಖಂಡಿಸಿದ್ದರು. ಸೇನೆ ಈ ಹೇಳಿಕೆಯಿಂದ ದೂರವುಳಿದು ನಿವೃತ್ತ ಅಧಿಕಾರಿಗಳು ಸೇನೆಯ ಕರ್ತವ್ಯದಲ್ಲಿರುವ ಸಿಬ್ಬಂದಿಗೆ ಇರುವ ನೀತಿ ಸಂಹಿತೆಗೆ ಒಳಪಡುವುದಿಲ್ಲ ಎಂದು ತಿಳಿಸಿತ್ತು.