ತನ್ವೀರ್ ಸೇಠ್ ಮೇಲಿನ ದಾಳಿ ಹಿಂದೆ ಎಸ್ಡಿಪಿಐ ಕೈವಾಡವಿರುವ ಶಂಕೆ ಇದೆ: ಸಿದ್ದರಾಮಯ್ಯ
ಮೈಸೂರು, ನ.18: ಮಾಜಿ ಸಚಿವ, ಹಾಲಿ ಶಾಸಕ ತನ್ವೀರ್ ಸೇಠ್ ಮೇಲೆ ನಡೆದಿರುವ ಹಲ್ಲೆ ಹಿಂದೆ ಎಸ್ಡಿಪಿಐ ಸಂಘಟನೆಯ ಕೈವಾಡವಿದೆ ಎಂಬ ಶಂಕೆಯಿದ್ದು. ಈ ಪ್ರಕರಣವನ್ನು ಎಸ್ಐಟಿ ತನಿಖೆಗೆ ವಹಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದರು.
ನಗರದ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ಸೋಮವಾರ ರಾತ್ರಿ ಆಗಮಿಸಿ ತನ್ವೀರ್ ಸೇಠ್ ಆರೋಗ್ಯ ವಿಚಾರಿಸಿದ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ತನ್ವೀರ್ ಮೇಲೆ ಹಲ್ಲೆ ನಡೆಸಿರುವ ವ್ಯಕ್ತಿ ಎಸ್ಡಿಪಿಐ ಸದಸ್ಯ. ಈ ಘಟನೆಯ ಹಿಂದೆ ಎಸ್ಡಿಪಿಐ ಸಂಘಟನೆ ಕೈವಾಡವಿರಬಹುದು ಎಂಬ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಇದೊಂದು ಪೂರ್ವ ನಿಯೋಜಿತ ಕೃತ್ಯ, ಇದನ್ನು ಒಬ್ಬನೇ ಮಾಡಲು ಸಾಧ್ಯವಿಲ್ಲ. ಹಾಗಾಗಿ ಈ ಕೃತ್ಯದ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಹಚ್ಚಬೇಕಿದೆ ಎಂದರು.
ಈ ಪ್ರಕರಣದ ಕುರಿತು ಸಂಪೂರ್ಣ ತನಿಖೆಯಾಗಬೇಕು. ಈ ಸಂಘಟನೆಯನ್ನು ನಿಷೇಧಿಸಬೇಕೊ, ಬೇಡವೊ ಎಂದು ನಂತರ ನೋಡೋಣ ಎಂದ ಸಿದ್ದರಾಮಯ್ಯ, ಜನಪ್ರತಿನಿಧಿಗೆ ಇಂತಹ ಸ್ಥಿತಿ ಬಂದರೆ ಇನ್ನು ಸಾಮಾನ್ಯ ಜನರ ಸ್ಥಿತಿ ಏನು ಎಂಬ ಅನುಮಾನ ಮೂಡುತ್ತದೆ. ಹಾಗಾಗಿ ಎಸ್ಐಟಿ ಗೆ ವಹಿಸಿ ಸಂಪೂರ್ಣ ತನಿಖೆ ಮಾಡಿಸಬೇಕು ಎಂದು ಹೇಳಿದರು.