2020 ರ ನಂತರ ಎಲೆಕ್ಟ್ರಿಕ್ ವೆಹಿಕಲ್ಗಳ ನೋಂದಣಿಗೆ ಆದ್ಯತೆ: ಗೌರವ್ ಗುಪ್ತ
ಬೆಂಗಳೂರು: ರಾಜ್ಯದಲ್ಲಿ ಎಲೆಕ್ಟ್ರಿಕ್ ವೆಹಿಕಲ್ ಪಾಲಿಸಿ ಜಾರಿಗೆ ತಂದಿದ್ದು, ಎಲೆಕ್ಟ್ರಿಕ್ ವೆಹಿಕಲ್ ಕ್ಲಸ್ಟರ್ ನಿರ್ಮಾಣಕ್ಕೆ ಸರಕಾರ ಮುಂದಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ ಹೇಳಿದರು.
ಬೆಂಗಳೂರು ಟೆಕ್ ಸಮಿಟ್ನಲ್ಲಿ "ಎಲೆಕ್ಟ್ರಿಕ್ ವೆಹಿಕಲ್ ಆ್ಯಂಡ್ ಚೇಂಜಿಂಗ್ ಲ್ಯಾಂಡ್ ಸ್ಕೇಪ್ ಆನ್ ಮೊಬಿಲಿಟಿ " ಕುರಿತು ಆಯೋಜಿಸಿದ್ದ ವಿಚಾರಗೋಷ್ಠಿಯಲ್ಲಿ ಮಾತನಾಡಿದರು.
ಕರ್ನಾಟಕದಲ್ಲಿ 2017 ರಲ್ಲಿ ಮೊದಲ ಬಾರಿಗೆ ಎಲೆಕ್ಟ್ರಿಕ್ ವೆಹಿಕಲ್ ಪಾಲಿಸಿ ಜಾರಿಗೆ ತರಲಾಗಿದೆ. ಭವಿಷ್ಯದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ವಾಹನ ಸಂಪೂರ್ಣ ಕಡಿತಗೊಳಿಸುವ ಉದ್ದೇಶದಿಂದ ಎಲೆಕ್ಟ್ರಿಕ್ ವೆಹಿಕಲ್ ಹಾಗೂ ಚಾರ್ಜಿಂಗ್ ಕೇಂದ್ರ ತೆರೆಯಲು ಉತ್ತೇಜಿಸಲಾಗುತ್ತಿದೆ. ಸರಕಾರ ಈ ನಿಟ್ಟಿನಲ್ಲಿ ದೊಡ್ಡ ಹೆಜ್ಜೆ ಇಟ್ಟಿದೆ. 2020 ರ ನಂತರದಲ್ಲಿ ಕೇವಲ ಎಲೆಕ್ಟ್ರಿಕ್ ಚಾಲಿತ ವೆಹಿಕಲ್ಗಳಿಗೆ ಮಾತ್ರ ನೋಂದಣಿ ಮಾಡುವ ಆದೇಶ ತರಲು ಚಿಂತಿಸಲಾಗಿದೆ. ಇದರ ಜೊತೆಗೆ ಖಾಸಗಿಯವರು ಸ್ವಯಂ ಪ್ರೇರಿತವಾಗಿ ಪಾರ್ಕಿಂಗ್ ಸ್ಥಳ, ಪೆಟ್ರೋಲ್ ಬಂಗ್ ಸೇರಿದಂತೆ ಜನಸಾಮಾನ್ಯರಿಗೆ ಅನುಕೂಲವಾಗುವ ಸಾರ್ವಜನಿಕ ಸ್ಥಳಗಳಲ್ಲಿ ಚಾರ್ಜಿಂಗ್ ಸೆಂಟರ್ ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಇದಲ್ಲದೆ ಸರಕಾರದ ವತಿಯಿಂದ ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿ ಬಸ್ಗಳನ್ನು ಎಲೆಕ್ಟ್ರಿಕ್ ವಾಹನವನ್ನಾಗಿ ಪರಿವರ್ತಿಸುವ ಕೆಲಸ ಮಾಡಲಾಗುವುದು ಎಂದರು.
ಕರ್ನಾಟಕದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ರಸ್ತೆಗಿಳಿಸುವ ನಿಟ್ಟಿನಲ್ಲಿ ಸಾಕಷ್ಟು ಕೈಗಾರಿಕಾ ಉದ್ಯಮಿಗಳು ಸರಕಾರದೊಂದಿಗೆ ಚರ್ಚಿಸಿದ್ದಾರೆ. ಮಹೀಂದ್ರ, ವೋಲ್ಟಾ ಇತರೆ ದೊಡ್ಡ ಕಂಪನಿಗಳು ಬೆಂಗಳೂರಿನಲ್ಲಿ ಆಸಕ್ತಿ ತೋರಿವೆ. ಹೊಸ ಟೆಕ್ನಾಲಜಿ ಹೊಂದಿರುವ ವಾಹನ ತರಲು ಇಚ್ಚಿಸುವ ನವೋದ್ಯಮಿಗಳಿಗೂ ಸರಕಾರ ಬೆಂಬಲ ನೀಡಲಿದೆ ಎಂದು ಅವರು ತಿಳಿಸಿದರು.