ಜಾನುವಾರು ಸಾಗಾಟ ಶಂಕೆ: ಇಬ್ಬರ ಥಳಿಸಿ ಹತ್ಯೆಗೈದ ಗುಂಪು
Photo: REUTERS
ಕೂಚ್ಬೆಹಾರ್, ನ. 21: ಪಶ್ಚಿಮಬಂಗಾಳದ ಕೂಚ್ಬೆಹಾರ್ನಲ್ಲಿ ಗೋವು ಕಳ್ಳಸಾಗಾಟಗಾರರೆಂಬ ಶಂಕೆಯಲ್ಲಿ ಗುಂಪೊಂದು ಇಬ್ಬರು ವ್ಯಕ್ತಿಗಳನ್ನು ಥಳಿಸಿ ಹತ್ಯೆಗೈದಿದೆ. ಕೂಚ್ಬೆಹಾರ್ನ ಪುತಿಮಾರಿ ಫುಲೇಶ್ವರಿ ಗ್ರಾಮದಲ್ಲಿ ಈ ಘಟನೆ ಬುಧವಾರ ಸಂಭವಿಸಿದೆ.
ಬಬ್ಲು ಮಿಲನ್ ಹಾಗೂ ಪ್ರಕಾಶ್ ದಾಸ್ ವ್ಯಾನ್ನಲ್ಲಿ ಜಾನುವಾರುಗಳನ್ನು ಕೊಂಡೊಯ್ಯುತ್ತಿರುವುದನ್ನು ಸ್ಥಳೀಯರು ಗಮನಿಸಿದ್ದರು ಹಾಗೂ ವ್ಯಾನ್ ತಡೆದು ಪ್ರಶ್ನಿಸಿದ್ದರು. ಆದರೆ, ಅವರು ಸಮರ್ಪಕ ಉತ್ತರ ನೀಡಲಿಲ್ಲ. ಇದರಿಂದ ಆಕ್ರೋಶಿತರಾದ ಸ್ಥಳೀಯರು ಇಬ್ಬರಿಗೂ ಥಳಿಸಿದರು ಹಾಗೂ ವ್ಯಾನ್ಗೆ ಬೆಂಕಿ ಹಚ್ಚಿದರು.
ಕೂಡಲೇ ಸ್ಥಳಕ್ಕೆ ಧಾವಿಸಿದ ಕೊಟ್ವಾಲಿ ಪೊಲೀಸರು ಬಬ್ಲು ಹಾಗೂ ಪ್ರಕಾಶ್ನನ್ನು ರಕ್ಷಿಸಿ ಆಸ್ಪತ್ರೆಗೆ ಕೊಂಡೊಯ್ದು ದಾಖಲಿಸಿದರು. ಆದರೆ, ಗಂಭೀರ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದ ಅವರಿಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.
ಪ್ರಕರಣದ ಕುರಿತು ತನಿಖೆ ಆರಂಭಿಸಲಾಗಿದೆ. ಪಶ್ಚಿಮಬಂಗಾಳದಲ್ಲಿ ಗುಂಪಿನಿಂದ ಥಳಿಸಿ ಹತ್ಯೆ ನಡೆಸುತ್ತಿರುವುದರ ವಿರುದ್ಧ ಕಾನೂನು ಮಂಜೂರು ಮಾಡಿದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ.