ಉಡುಪಿ : ಬಾಲಕಿಯ ಗ್ಯಾಂಗ್ ರೇಪ್ ಪ್ರಕರಣ ; ಆರೋಪಿಗಳಿಬ್ಬರು ದೋಷಿ
ನ.25ಕ್ಕೆ ಶಿಕ್ಷೆ ಪ್ರಮಾಣ ಪ್ರಕಟ
ಉಡುಪಿ, ನ. 22: ಮೂರು ವರ್ಷಗಳ ಹಿಂದೆ ಉಡುಪಿ ನಗರದ ಹೊರ ವಲಯದಲ್ಲಿ ನಡೆದ ಅಪ್ರಾಪ್ತ ಬಾಲಕಿ ಮೇಲಿನ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ದೋಷಿ ಎಂಬುದಾಗಿ ಶುಕ್ರವಾರ ಘೋಷಿಸಿರುವ ಉಡುಪಿ ಜಿಲ್ಲಾ ವಿಶೇಷ ನ್ಯಾಯಾಲಯ, ಶಿಕ್ಷೆಯ ಪ್ರಮಾಣ ವನ್ನು ನ. 25ರಂದು ಪ್ರಕಟಿಸಲಿದೆ.
ರಾಜಸ್ಥಾನ ಮೂಲದ ಮುಖೇಶ್ ಸೇನಿ ಯಾನೆ ಮುಖೇಶ್ ಮಾಲಿ (20) ಹಾಗೂ ಪದಮ್ ಸಿಂಗ್ ಸೇನಿ (28) ಪ್ರಕರಣದ ಆರೋಪಿಗಳು.
ಟೈಲ್ಸ್ ಕೆಲಸ ಮಾಡುತ್ತಿದ್ದ ಇವರಿಬ್ಬರು ಉಡುಪಿಯ 76 ಬಡಗಬೆಟ್ಟುವಿನ ಬಾಡಿಗೆ ಮನೆ ಯಲ್ಲಿ ವಾಸವಾಗಿದ್ದರು.
ರಾಜಸ್ತಾನ ಮೂಲದ 15 ವರ್ಷ ವಯಸ್ಸಿನ ಸಂತ್ರಸ್ತ ಬಾಲಕಿಯ ಕುಟುಂಬ ಕಳೆದ 20 ವರ್ಷಗಳಿಂದ ಉಡುಪಿ ನಗರದ ಹೊರವಲಯದಲ್ಲಿ ವಾಸವಾಗಿತ್ತು. ಬಾಲಕಿಯ ತಂದೆಯೊಂದಿಗೆ ಟೈಲ್ಸ್ ಕೆಲಸಕ್ಕೆ ಹೋಗುತ್ತಿದ್ದ ಆರೋಪಿಗಳು ಆಗಾಗ ಬಾಲಕಿಯ ಮನೆಗೆ ಬರುತ್ತಿರುವುದರಿಂದ ಸಂತ್ರಸ್ತ ಬಾಲಕಿಯ ಪರಿಚಯವಾಗಿತ್ತು. ಆ ಸಮಯದಲ್ಲಿ ಆಕೆ 10ನೆ ತರಗತಿಯ ವಿದ್ಯಾರ್ಥಿನಿ ಯಾಗಿದ್ದರು.
ಮನೆಯಲ್ಲಿ ತಾಯಿ, ಸಹೋದರರು ಬೇರೆ ಕೋಣೆಯಲ್ಲಿ ಮಲಗಿದ್ದಾಗ ಮತ್ತು ತಂದೆ ಇಲ್ಲದ ಸಂದರ್ಭ 2016ರ ಜು.8ರಂದು ಮಧ್ಯರಾತ್ರಿ ವೇಳೆ ಆರೋಪಿಗಳು ಮನೆಗೆ ಬಂದು ಬಾಗಿಲು ಬಡಿದಿದ್ದು, ಬಾಗಿಲು ತೆಗೆದ ಬಾಲಕಿ ಯನ್ನು ಆರೋಪಿಗಳು ಹೊರಗಡೆ ಎಳೆದು ತಮ್ಮ ಓಮ್ನಿ ಕಾರಿನಲ್ಲಿ ಅಪಹರಿಸಿದ್ದರು. ಈ ವೇಳೆ ಪ್ರಜ್ಞೆ ಕಳೆದುಕೊಂಡ ಬಾಲಕಿಯನ್ನು ತಮ್ಮ ಬಾಡಿಗೆ ಮನೆಗೆ ಕರೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ಎಸಗಿ, ಬೆದರಿಕೆ ಹಾಕಿದ್ದರು ಎಂದು ದೂರಲಾಗಿದೆ.
ಬಳಿಕ ಆರೋಪಿಗಳು ಬಾಲಕಿಯ ಕೈ ಮತ್ತು ಬಾಯಿಗೆ ಕಟ್ಟಿದ್ದ ಬಟ್ಟೆಯನ್ನು ಕೆರೆಯ ನೀರಿಗೆ ಎಸೆದು ಸಾಕ್ಷನಾಶ ಪಡಿಸಿದ್ದರು. ಮರುದಿನ ಜು.9ರಂದು ಮನೆಗೆ ಬಂದ ಬಾಲಕಿ ಮನೆಯವರಿಗೆ ವಿಷಯ ತಿಳಿಸಿದ್ದು, ಕೂಡಲೇ ಆಕೆಯನ್ನು ಉಡುಪಿ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಯಿತು.
ಈ ಬಗ್ಗೆ ಜು.10ರಂದು ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಕಲಂ 366 ಎ(ಅಪಹರಣ), 376 ಡಿ(ಸಾಮೂಹಿತ ಅತ್ಯಾಚಾರ), 201(ಸಾಕ್ಷನಾಶ), 506(ಜೀವ ಬೆದರಿಕೆ) ಜೊತೆ 34 ಭಾರತೀಯ ದಂಡ ಸಂಹಿತೆ ಮತ್ತು 4,6, ಪೊಕ್ಸೋ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಅದೇ ದಿನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಪ್ರಕರಣದ ತನಿಖೆ ಯನ್ನು ಆಗಿನ ಉಡುಪಿ ವೃತ್ತ ನಿರೀಕ್ಷಕರಾದ ಶ್ರೀಕಾಂತ್ ಕೆ. ಹಾಗೂ ಜೈಶಂಕರ್ ನಡೆಸಿದ್ದರು. ತನಿಖಾಧಿಕಾರಿಗಳು 2016ರ ಸೆ.29ರಂದು ಉಡುಪಿ ಜಿಲ್ಲಾ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ಈ ಮಧ್ಯೆ ಎರಡು ಬಾರಿ ಜಿಲ್ಲಾ ನ್ಯಾಯಾಲಯದಲ್ಲಿ ಮತ್ತು ಒಂದು ಬಾರಿ ಹೈಕೋರ್ಟ್ನಲ್ಲಿ ಆರೋಪಿಗಳ ಜಾಮೀನು ಅರ್ಜಿ ತಿರಸ್ಕೃತಗೊಂಡಿತ್ತು.
ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು, ಒಟ್ಟು 34 ಸಾಕ್ಷಿಗಳ ಪೈಕಿ ಪ್ರಾಸಿಕ್ಯೂಶನ್ ಪರವಾಗಿ 21 ಸಾಕ್ಷಿಗಳನ್ನು ವಿಚಾ ರಣೆಗೆ ಒಳಪಡಿಸಿದ್ದರು. ಆರೋಪಿಗಳ ಮೇಲಿನ ಆರೋಪ ಸಾಬೀತಾಗಿದೆ ಎಂದು ಅಭಿಪ್ರಾಯ ಪಟ್ಟ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಿ.ಎಂ. ಜೋಶಿ, ಆರೋಪಿಗಳಿಬ್ಬರು ದೋಷಿ ಎಂಬುದಾಗಿ ಆದೇಶಿಸಿದರು. ಪ್ರಾಸಿ ಕ್ಯೂಶನ್ ಪರವಾಗಿ ಜಿಲ್ಲಾ ವಿಶೇಷ ಸರಕಾರಿ ಅಭಿಯೋಜಕ ವಿಜಯ ವಾಸು ಪೂಜಾರಿ ವಾದಿಸಿದ್ದರು.