ಗಡ್ಡ ಬೋಳಿಸುವಂತೆ 9 ಪೊಲೀಸರಿಗೆ ನೀಡಿದ್ದ ಆದೇಶ ವಾಪಸ್
ಭಾರೀ ಆಕ್ರೋಶದ ನಂತರ ಕ್ರಮ
ಫೋಟೊ: muslimmirror.com
ಆಲ್ವಾರ್, ನ. 22: ಗಡ್ಡ ಬೋಳಿಸುವಂತೆ ಒಂಬತ್ತು ಮುಸ್ಲಿಂ ಪೊಲೀಸರಿಗೆ ನೀಡಿದ ಆದೇಶವನ್ನು ರಾಜಸ್ಥಾನದ ಆಲ್ವಾರ್ ಜಿಲ್ಲೆಯ ಪೊಲೀಸರು ಶುಕ್ರವಾರ ಹಿಂದೆ ತೆಗೆದುಕೊಂಡಿದ್ದಾರೆ.
ಗಡ್ಡ ಬೋಳಿಸುವಂತೆ 9 ಮಂದಿ ಪೊಲೀಸರಿಗೆ ಆಲ್ವಾರ್ ಜಿಲ್ಲೆಯ ಪೊಲೀಸರು ಗುರುವಾರ ಆದೇಶ ನೀಡಿದ್ದರು. ಈ ಸುದ್ದಿ ಹರಡಿ ಅಸಮಾಧಾನ ವ್ಯಕ್ತವಾಗುತ್ತಿದ್ದಂತೆ ಆಲ್ವಾರದ ಪೊಲೀಸ್ ಅಧೀಕ್ಷಕ ಅನಿಲ್ ಪಾರಿಸ್ ದೇಶ್ಮುಖ್ ಶುಕ್ರವಾರ ಈ ಆದೇಶವನ್ನು ಹಿಂದೆ ತೆಗೆದುಕೊಂಡರು.
“ನಾವು ಈ ಹಿಂದೆ 32 ಮುಸ್ಲಿಂ ಪೊಲೀಸರಿಗೆ ಗಡ್ಡ ಬಿಡಲು ಅವಕಾಶ ನೀಡಿದ್ದೆವು. ಗುರುವಾರ 9 ಮುಸ್ಲಿಂ ಪೊಲೀಸರ ಅನುಮತಿ ಹಿಂದೆ ತೆಗೆದುಕೊಂಡೆವು. ಉಳಿದ 23 ಮುಸ್ಲಿಂ ಪೊಲೀಸರಿಗೆ ಗಡ್ಡ ಬಿಡಲು ಅನುಮತಿ ಮುಂದುವರಿಸಿದ್ದೇವೆ” ಎಂದು ಪೊಲೀಸರು ತಿಳಿಸಿದ್ದರು.
‘‘ಪೊಲೀಸರು ಪಕ್ಷಪಾತ ರಹಿತವಾಗಿ ಕಾರ್ಯ ನಿರ್ವಹಿಸಬೇಕು. ಮಾತ್ರವಲ್ಲದೆ, ಪಕ್ಷಪಾತ ರಹಿತರಂತೆ ಕಾಣಬೇಕು’’ ಎಂದು ದೇಶ್ಮುಖ್ ಹೇಳಿದ್ದಾರೆ.
ಪೊಲೀಸರು ಗಡ್ಡ ಬಿಡುವುದಕ್ಕೆ ಇಲಾಖಾ ಮುಖ್ಯಸ್ಥರು ಅನುಮತಿ ನೀಡುವ ಅಧಿಕಾರ ಸರಕಾರದ ನಿಯಮದಲ್ಲಿದೆ ಎಂದು ಅವರು ತಿಳಿಸಿದ್ದಾರೆ.