ಮಂಗಳೂರು : ಅಪಘಾತಕ್ಕೆ ಶಿಕ್ಷಕಿ ಮೃತ್ಯು ಪ್ರಕರಣ ; ಲಾರಿ ಚಾಲಕ ಸೆರೆ
ಮಂಗಳೂರು, ಡಿ.2: ಲಾರಿಯೊಂದು ಆಟೊ ರಿಕ್ಷಾಕ್ಕೆ ಢಿಕ್ಕಿ ಹೊಡೆದು ಶಾಲಾ ಶಿಕ್ಷಕಿ ಶೈಲಜಾ ರಾವ್ (55) ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಮಂಗಳೂರು ಪೊಲೀಸರು ಸೋಮವಾರ ಬಂಧಿಸಿ, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಗದಗ ಜಿಲ್ಲೆಯ ನರಗುಂದ ತಾಲೂಕಿನ ಶಿರೋಳ ನಿವಾಸಿ ಸಿದ್ದಲಿಂಗನಗೌಡ ಪಾಟೀಲ್ (29) ಬಂಧಿತ ಆರೋಪಿ.
ಪಣಂಬೂರಿನ ಕೇಂದ್ರಿಯ ವಿದ್ಯಾಲಯ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಶೈಲಜಾ, ರವಿವಾರ ಮಧ್ಯಾಹ್ನ ಕದ್ರಿ ಕಂಬಳದಲ್ಲಿ ನಡೆದ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದರು.
ಬಟ್ಟಗುಡ್ಡ ಕಡೆಯಿಂದ ಭಾರತ್ ಬೀಡಿ ಜಂಕ್ಷನ್ ಕಡೆಗೆ ಬರುತ್ತಿದ್ದ ಆಟೊರಿಕ್ಷಾಕ್ಕೆ ಎದುರಿನಿಂದ ಬರುತ್ತಿದ್ದ ಲಾರಿಯು ಕದ್ರಿ ಕಂಬಳದಲ್ಲಿ ಢಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಶಾಲಾ ಶಿಕ್ಷಕಿ ಮೃತಪಟ್ಟರೆ, ರಿಕ್ಷಾ ಚಾಲಕ ವಿನೋದ್ ಗಂಭೀರವಾಗಿ ಗಾಯಗೊಂಡಿದ್ದರು. ಈ ಕುರಿತು ಮಂಗಳೂರು ಪೂರ್ವ (ಕದ್ರಿ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅಪಘಾತ ನಡೆಸಿದ ಲಾರಿ ಚಾಲಕ ಸಿದ್ದಲಿಂಗನಗೌಡನನ್ನು ಸೋಮವಾರ ಬಂಧಿಸಿರುವ ಕದ್ರಿ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿ ಸಿದ್ದಲಿಂಗನಗೌಡನಿಗೆ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.