ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯ ಹತ್ಯೆ: ಆರೋಪಿ ಪತ್ನಿ, ಪ್ರಿಯಕರನಿಗೆ ಜೀವಾವಧಿ ಶಿಕ್ಷೆ
ಚಿಕ್ಕಮಗಳೂರು, ಡಿ.6: ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ದೊಣ್ಣೆಯಿಂದ ಹೊಡೆದು ಹತ್ಯೆಗೈದ ಆರೋಪದ ಮೇರೆಗೆ ಪತ್ನಿ ಹಾಗೂ ಆಕೆಯ ಪ್ರಿಯಕರನಿಗೆ ನಗರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
ಪ್ರಕರಣದ 1ನೇ ಆರೋಪಿ ವಿನಯ್ ಗೌಡ, 2ನೇ ಆರೋಪಿ ಸುಜಾತಾ ಎಂಬವರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ಇಬ್ಬರೂ ಮದುವೆಯಾಗಲು ಇಚ್ಛಿಸಿದ್ದರು. ತಮ್ಮಿಬ್ಬರ ಮದುವೆಗೆ ಆರೋಪಿ ಸುಜಾತಾಳ ಪತಿ ಯೋಗೇಂದ್ರ ಅಡ್ಡಿಪಡಿಸುವನೆಂಬ ಕಾರಣಕ್ಕೆ 2016 ನ.3ರಂದು ಯೋಗೆಂದ್ರನನ್ನು ನರಸಿಂಹರಾಜುಪುರ ತಾಲೂಕಿನ ಶೇಡಿಗಾರು ಗ್ರಾಮದಲ್ಲಿನ ತನ್ನ ಜಮೀನಿನಲ್ಲಿ ಹಿಂದಿನಿಂದ ಬಂದು ದೊಣ್ಣೆಯಿಂದ ತಲೆಗೆ ಹೊಡೆದು ಕೊಲ್ಲಲಾಗಿತ್ತು.
ಪ್ರಕರಣ ಹಿನ್ನೆಲೆ ಎನ್.ಆರ್.ಪುರ ಠಾಣಾ ಪೊಲೀಸರು ಭಾ.ದಂ.ಸಂ. ಕಲಂ 302, 109 ಮತ್ತು 120(ಬಿ)ರನ್ವಯ ಅಪರಾಧ ಪ್ರಕರಣ ದಾಖಲಿಸಿಕೊಂಡು ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಪ್ರಕರಣ ವಿಚಾರಣೆ ನಡೆಸಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಉಮೇಶ್.ಎಂ.ಅಡಿಗ ಅವರು 1ನೇ ಆರೋಪಿ ವಿನಯ್ ಗೌಡನಿಗೆ ಭಾ.ದಂ.ಸಂ.ಕಲಂ 302, 120(ಬಿ)ರ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಹಾಗೂ 20 ಸಾವಿರ ರೂ. ದಂಡ ವಿಧಿಸಿದ್ದು 2ನೇ ಆರೋಪಿ ಸುಜಾತಾಳಿಗೆ ಭಾ.ದಂ.ಸಂ.ಕಲಂ 302, 120(ಬಿ) ಮತ್ತು 109ರನ್ವಯ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಹಾಗೂ 30 ಸಾವಿರ ರೂ. ದಂಡ ವಿಧಿಸಿದ್ದಾರೆ.
ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ವಿ.ಜಿ.ಯಳಗೇರಿ ವಾದ ಮಂಡಿಸಿದ್ದಾರೆ.