ಬಿಜೆಪಿ ಸೇರ್ಪಡೆ ಬಗ್ಗೆ ಕಾರ್ಯಕರ್ತರೊಂದಿಗೆ ಚರ್ಚಿಸಿ ನಿರ್ಧಾರ: ಶರತ್ ಬಚ್ಚೇಗೌಡ
ಬೆಂಗಳೂರು, ಡಿ.9: ಹೊಸಕೋಟೆ ಮತದಾರರು ಸ್ವಾಭಿಮಾನಿಗಳು ಎಂಬುದು ಈ ಚುನಾವಣೆಯಲ್ಲಿ ರುಜುವಾತಾಗಿದೆ. ಬಿಜೆಪಿ ಸೇರುವುದರ ಬಗ್ಗೆ ಯಾವುದೇ ಆಲೋಚನೆ ಮಾಡಿಲ್ಲ. ಬಿಜೆಪಿ ಅಥವಾ ಇತರೆ ಪಕ್ಷ ಸೇರ್ಪಡೆ ಕುರಿತಂತೆ ಕಾರ್ಯಕರ್ತರ ಜೊತೆ ಸಮಾಲೋಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದ್ದಾರೆ.
ಉಪ ಚುನಾವಣಯಲ್ಲಿ ಗೆಲುವು ಸಾಧಿಸಿದ ಬಳಿಕ ದೇವನಹಳ್ಳಿ ಸಮೀಪದ ಮತ ಎಣಿಕೆ ಕೇಂದ್ರದ ಬಳಿ ಮಾತನಾಡಿದ ಅವರು, ಈ ಗೆಲವು ಹೊಸಕೋಟೆ ಮತದಾರರ ಸ್ವಾಭಿಮಾನದ ಗೆಲುವಾಗಿದೆ. ಮುಂದಿನ ದಿನಗಳಲ್ಲಿ ನಾನು ಬಿಜೆಪಿ ಸೇರಬೇಕಾ, ಬೇಡವಾ ಎಂದು ಕ್ಷೇತ್ರದ ಮತದಾರರೊಂದಿಗೆ ಚರ್ಚಿಸಿ ತೀರ್ಮಾನ ಮಾಡುತ್ತೇನೆ ಎಂದರು.
ಉಪ ಚುನಾವಣೆಯಲ್ಲಿ ನಮ್ಮ ತಂದೆ ನನ್ನ ಪರವಾಗಿ ಕೆಲಸ ಮಾಡಿಲ್ಲ. ಕಳೆದ ಎರಡೂವರೆ ತಿಂಗಳಿನಿಂದ ಅವರನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ. ನಾನು ಮನೆ ಬಿಟ್ಟು ಹೊಸಕೋಟೆಯಲ್ಲಿ ಇದ್ದರೆ ನಮ್ಮ ತಂದೆ ದಿಲ್ಲಿಯಲ್ಲಿದ್ದರು. ನನ್ನ ಪರವಾಗಿ ಅವರು ಕೆಲಸ ಮಾಡದಿದ್ದರೂ ಅವರ ಆಶೀರ್ವಾದ ಹಾಗೂ ಕ್ಷೇತ್ರದಲ್ಲಿ ಅವರು ಕಟ್ಟಿರುವ ಕಾರ್ಯಕರ್ತರ ಪಡೆ ನನ್ನ ಬೆನ್ನಿಗೆ ನಿಂತಿತು ಎಂದರು.
ಮಗನ ಪರವಾಗಿ ಕೆಲಸ ಮಾಡುವಂತೆ ಬಚ್ಚೇಗೌಡ ಸೂಚಿಸಿದ್ದಾರೆ ಎಂಬ ಎಂಟಿಬಿ ನಾಗರಾಜ್ ಆರೋಪಕ್ಕೆ ಪ್ರತಿಕ್ರಿಯಿಸಿ, ಫೋನ್ನಲ್ಲಿಯೇ ಎಲ್ಲವೂ ಆಗುವ ಹಾಗಿದ್ದರೆ ಇಷ್ಟೊಂದು ಶ್ರಮ ಪಡಬೇಕಿತ್ತಾ? ಅಷ್ಟಕ್ಕೂ ತಂದೆ ದಿಲ್ಲಿಯಲ್ಲಿದ್ದಾರೆ. ಅವರ ಆರೋಪ ಸತ್ಯಕ್ಕೆ ದೂರವಾದದ್ದು ಎಂದರು.