BREAKING NEWS | ಲೋಕಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರ
ಹೊಸದಿಲ್ಲಿ, ಡಿ. 10: ಪೌರತ್ವ ತಿದ್ದುಪಡಿ ಮಸೂದೆ ಡಿಸೆಂಬರ್ 9ರಂದು 12 ಗಂಟೆಗಳ ದೀರ್ಘ ಕಾಲದ ಚರ್ಚೆಯ ಬಳಿಕ ಲೋಕಸಭೆಯಲ್ಲಿ ಅಂಗೀಕಾರಗೊಂಡಿದೆ.
2019 ಡಿಸೆಂಬರ್ 4ರಂದು ಈ ಮಸೂದೆಗೆ ಕೇಂದ್ರ ಸಂಪುಟ ಅನುಮೋದನೆ ನೀಡಿತ್ತು. ಈ ಮಸೂದೆಯ ಕೆಲವು ನಿಯಮಗಳ ಕಾರಣಕ್ಕೆ ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದವು ಹಾಗೂ ಮಸೂದೆಯನ್ನು ಅಲ್ಪಸಂಖ್ಯಾತ ವಿರೋಧಿ ಎಂದು ಕರೆದಿದ್ದವು.
ಸಂಸತ್ತಿನಲ್ಲಿ 311 ಮತಗಳ ಮೂಲಕ ಈ ಮಸೂದೆ ಅಂಗೀಕಾರಗೊಂಡಿತು. 80 ಸಂಸದರು ಮಸೂದೆಗೆ ವಿರುದ್ಧವಾಗಿ ಮತ ಚಲಾಯಿಸಿದ್ದರು. ಬಿಜೆಪಿ ತನ್ನ ಪಕ್ಷದ ರಾಜ್ಯ ಸಭಾ ಸದಸ್ಯರಿಗೆ ಡಿಸೆಂಬರ್ 10 ಹಾಗೂ 11ರಂದು ಹಾಜರಾಗುವಂತೆ ವಿಪ್ ಹೊರಡಿಸಿತ್ತು. ರಾಜ್ಯ ಸಭೆಯಲ್ಲಿ ಕೂಡ ಈ ಮಸೂದೆ ಅಂಗೀಕಾರಗೊಳಿಸಲು ಬಿಜೆಪಿ ಅತಿ ಹೆಚ್ಚು ಪ್ರಯತ್ನಿಸುತ್ತಿದೆ ಎಂದು ಹೇಳಲಾಗುತ್ತಿದೆ.
ಈ ಮಸೂದೆ ತಾರತಮ್ಯದಿಂದ ಕೂಡಿದೆ ಹಾಗೂ ಮುಸ್ಲಿಮರನ್ನು ತನ್ನ ವ್ಯಾಪ್ತಿಯಿಂದ ಹೊರಗಿಡುತ್ತದೆ ಎಂಬ ಪ್ರತಿಪಕ್ಷದ ಪ್ರತಿಪಾದನೆ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ‘‘ಧರ್ಮದ ಆಧಾರದಲ್ಲಿ ಯಾವುದೇ ತಾರತಮ್ಯ ಇರುವುದಿಲ್ಲ’’ ಎಂದು ಹೇಳಿದ್ದಾರೆ.
ಪೌರತ್ವ ತಿದ್ದುಪಡಿ ಮಸೂದೆ ಸಂವಿಧಾನದ ಕಲಂ 14ನ್ನು ಉಲ್ಲಂಘಿಸುವುದಿಲ್ಲ. ಯಾಕೆಂದರೆ, ಅದು ಕಿರುಕುಳಕ್ಕೊಳಗಾದ ಜನರಿಗೆ ಪೌರತ್ವ ನೀಡುವ ಉದ್ದೇಶವನ್ನು ಹೊಂದಿದೆ ಎಂದು ಅಮಿತ್ ಶಾ ಹೇಳಿದ್ದಾರೆ.