ಪೌರತ್ವ ಮಸೂದೆ ವಿರೋಧಿಸಿ ಈಶಾನ್ಯ ರಾಜ್ಯಗಳಲ್ಲಿ ತೀವ್ರ ಪ್ರತಿಭಟನೆ
ಗುವಾಹಟಿ, ಡಿ.10: ಲೋಕಸಭೆಯಲ್ಲಿ ಸೋಮವಾರ ಅಂಗೀಕಾರವಾಗಿರುವ ವಿವಾದಾತ್ಮಕ ಪೌರತ್ವ(ತಿದ್ದುಪಡಿ) ಮಸೂದೆಯನ್ನು ವಿರೋಧಿಸಿ ಮಂಗಳವಾರ ಬೀದಿಗೆ ಇಳಿದಿರುವ ಸಾವಿರಾರು ಪ್ರತಿಭಟನಾಕಾರರು ಈಶಾನ್ಯ ರಾಜ್ಯಗಳಲ್ಲಿ 11 ಗಂಟೆಗಳ ಕಾಲ ಮುಷ್ಕರ ಆರಂಭಿಸಿದ್ದಾರೆ.
ಮುಷ್ಕರವು ಮಂಗಳವಾರ ಬೆಳಗ್ಗೆ 5 ಗಂಟೆಗೆ ಆರಂಭವಾಗಿದ್ದು, ಸಂಜೆ 4ರ ತನಕ ಮುಂದುವರಿಯಲಿದೆ. ಅಸ್ಸಾಂ, ಅರುಣಾಚಲ ಪ್ರದೇಶ, ಮೇಘಾಲಯ, ಮಿಝೊರಾಂ ಹಾಗೂ ತ್ರಿಪುರಾದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಹಾರ್ನ್ಬಿಲ್ ಫೆಸ್ಟಿವೆಲ್ ನಡೆಯುತ್ತಿರುವ ಕಾರಣ ನಾಗಾಲ್ಯಾಂಡ್ನಲ್ಲಿ ಬಂದ್ ನಡೆಯುತ್ತಿಲ್ಲ. ಗುರುತಿಸುವಿಕೆಗಾಗಿ ನಮ್ಮ ಹೋರಾಟ ಎಂದು ಹೇಳುತ್ತಿರುವ ಪ್ರತಿಭಟನಾಕಾರರು ಕೇಂದ್ರ ಸರಕಾರದ ವಿರುದ್ಧ ಘೋಷಣೆ ಮೊಳಗಿಸಿದ್ದಾರೆ.
ಸೋಮವಾರ ಲೋಕಸಭೆಯಲ್ಲಿ ಅಂಗೀಕಾರವಾಗಿರುವ ಪೌರತ್ವ (ತಿದ್ದುಪಡಿ) ಮಸೂದೆಯ ಪ್ರಕಾರ, ಧಾರ್ಮಿಕ ದಬ್ಬಾಳಿಕೆಗೆ ಒಳಗಾಗಿ ಪಾಕಿಸ್ತಾನ,ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನದಿಂದ ಬರುವ ಮುಸ್ಲಿಮೇತರ ನಿರಾಶ್ರಿತರಿಗೆ ಭಾರತೀಯ ನಾಗರಿಕತ್ವ ನೀಡಲಾಗುತ್ತದೆ. ಭಾರತಕ್ಕೆ ಬಂದು 5 ವರ್ಷಗಳಾಗಿದ್ದ ನಿರಾಶ್ರಿತರಿಗೆ ಪೌರತ್ವ ನೀಡಲಾಗುತ್ತದೆ.