ಡಿ.12ರಂದು ಮೀನು ಸಾಗಾಟ ಲಾರಿ ಮುಷ್ಕರ
ಮಂಗಳೂರು, ಡಿ.11: ಮಂಗಳೂರು ದಕ್ಕೆ ಮೀನು ಲಾರಿ ಚಾಲಕರ ಸಂಘ (ಸಿಐಟಿಯು) ಮತ್ತು ಕರಾವಳಿ ಕರ್ನಾಟಕ ಚಾಲಕರ ಸಂಘದ ವತಿಯಿಂದ ಡಿ.12ರಂದು ಮೀನು ಸಾಗಾಟ ಲಾರಿ ಮುಷ್ಕರ ನಡೆಯಲಿದೆ.
ಮೀನು ಸಾಗಾಟ ಲಾರಿಗಳ ಮೀನು ತ್ಯಾಜ್ಯ ನೀರು ಸಂಗ್ರಹವಾಗುವ ಟ್ಯಾಂಕ್ಗಳಿಂದ ತ್ಯಾಜ್ಯ ನೀರು ಹೊರಚೆಲ್ಲಲು ಈ ಮೂರು ಜಿಲ್ಲೆಗಳಲ್ಲಿ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಸ್ಥಳದ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಬೇಕು ಎಂದು ಆಗ್ರಹಿಸಿ ಈ ಮುಷ್ಕರ ನಡೆಯಲಿದೆ.
ಪರಿಸರ ಹಾಳಾಗುತ್ತದೆ, ಅಪಘಾತವಾಗುತ್ತದೆ ಎಂಬ ಕಾರಣ ನೀಡಿ ಲಾರಿಗಳನ್ನು ತಡೆದು ಚಾಲಕರಿಗೆ ಹಲ್ಲೆ ನಡೆಸುವುದು, ಹಣ ಲೂಟಿ ಮಾಡುವುದು,ಮೊಬೈಲ್ ಕಸಿಯುವುದು ಇತ್ಯಾದಿ ದೌರ್ಜನ್ಯ ನಡೆಯುತ್ತಿದೆ. ಪೊಲೀಸರು ಮೀನು ಲೋರಿಗಳನ್ನು ವಶಕ್ಕೆ ತೆಗೆದುಕೊಂಡು ಎಫ್ಐಆರ್ ಹಾಕಿ ಕೋರ್ಟಿಗೆ ಹಾಜರಿಪಡಿಸುತ್ತಿರುವುದರಿಂದ ಚಾಲಕರಿಗೆ ಮತ್ತು ಮಾಲಕರಿಗೆ ಆರ್ಥಿಕ ನಷ್ಟ ಉಂಟಾಗುತ್ತಿದೆ. ಆ ಹಿನ್ನಲೆಯಲ್ಲಿ ದ.ಕ., ಉಡುಪಿ ಮತ್ತು ಉ.ಕ.ಜಿಲ್ಲೆಯ ಮೀನು ಸಾಗಾಟ ಲಾರಿ ಚಾಲಕರು ಡಿ.12ರಂದು ಪೂ.11 ಗಂಟೆಗೆ ದ.ಕ.ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆಯುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.