ಆಸ್ಪತ್ರೆಯಲ್ಲಿ ಸಿದ್ದರಾಮಯ್ಯರನ್ನು ಭೇಟಿಯಾದ ಸಿಎಂ ಯಡಿಯೂರಪ್ಪ, ಗೃಹ ಸಚಿವ ಬೊಮ್ಮಾಯಿ
'ನಿಮಗೂ ಹೃದಯವಿದೆ ಎಂದು ಗೊತ್ತಾಯಿತು’ ಎಂದ ಸಚಿವ ಈಶ್ವರಪ್ಪ
ಬೆಂಗಳೂರು, ಡಿ. 12: ‘ನಾನು ಆರೋಗ್ಯವಾಗಿದ್ದೇನೆ, ಯಾರೂ ಆತಂಕಪಡುವ ಅಗತ್ಯವಿಲ್ಲ. ಇನ್ನು ಎರಡು ದಿನಗಳಲ್ಲಿ ವಾಪಸ್ ಬರಲಿದ್ದೇನೆ’ ಎಂದು ವಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಸಿದ್ದರಾಮಯ್ಯ ಅವರನ್ನು ಗುರುವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಖುದ್ದು ಭೇಟಿ ಮಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವರಾದ ಕೆ.ಎಸ್.ಈಶ್ವರಪ್ಪ, ಬಸವರಾಜ ಬೊಮ್ಮಾಯಿ ಯೋಗಕ್ಷೇಮ ವಿಚಾರಿಸಿ, ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದರು.
ಈ ವೇಳೆ ಸಿಎಂ ಜತೆ ಮಾತನಾಡಿದ ಸಿದ್ದರಾಮಯ್ಯ, 2008ರಲ್ಲಿ ಹೃದಯ ಸಮಸ್ಯೆ ಕಾರಣ ಎರಡು ರಕ್ತನಾಳಗಳಿಗೆ ಸ್ಟಂಟ್ ಅಳವಡಿಸಿಕೊಂಡಿದ್ದೆ. ಆ ಬಳಿಕ ಬಹಳ ಕ್ರಿಯಾಶೀಲನಾಗಿ ಓಡಾಡಿದ್ದರೂ ಏನೂ ಆಗಿರಲಿಲ್ಲ. ಅನಂತರ ಒಂದು ರಕ್ತನಾಳದಲ್ಲಿ ಬ್ಲಾಕ್ ಆಗಿತ್ತು. ವೈದ್ಯರು ಆಂಜಿಯೋಗ್ರಾಮ್ ಮಾಡಿದ್ದು, ಈಗಲೇ ಮನೆಗೆ ತೆರಳಬಹುದಿತ್ತು. ವೈದ್ಯರು ಹೇಳಿದ ಕಾರಣ ಒಂದೆರಡು ದಿನ ಇಲ್ಲೆ ಇರಲಿದ್ದೇನೆ. ಭೇಟಿಗೆ ಬರುವವರ ಸಂಖ್ಯೆ ಜಾಸ್ತಿಯಾಗುತ್ತದೆ. ಬ್ಲಾಕೇಜ್ ಇದ್ದುದರಿಂದ ರಕ್ತ ಪರಿಚಲನೆ ಸರಾಗವಾಗಿರಲಿಲ್ಲ. ಹೀಗಾಗಿ ಬದಲಾಯಿಸಿದ್ದಾರೆ. ಮೊದಲಿನಂತೆ ಆಗಲಿದ್ದೇನೆ ಎಂದು ಹೇಳಿದ್ದಾರೆಂದು ಗೊತ್ತಾಗಿದೆ.
‘ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರಿಂದ ನಿಮಗೂ ಹೃದಯವಿದೆ ಎಂದು ಗೊತ್ತಾಯಿತು’
-ಕೆ.ಎಸ್.ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಸಚಿವ
ಆರೋಗ್ಯ ವಿಚಾರಿಸಿದ ಅಹ್ಮದ್ ಪಟೇಲ್, ಕೆ.ಸಿ.ವೇಣುಗೋಪಾಲ್
ಎಐಸಿಸಿ ಅಧ್ಯಕ್ಷ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಸಿದ್ದರಾಮಯ್ಯ ಅವರಿಗೆ ದೂರವಾಣಿ ಕರೆ ಮಾಡಿ ಆರೋಗ್ಯ ವಿಚಾರಿಸಿ, ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.