ವಿದ್ಯಾರ್ಥಿಗಳಿಂದ ಬಾಬರಿ ಮಸೀದಿ ಪ್ರತಿಕೃತಿ ಧ್ವಂಸ: ಕೋಮುದ್ವೇಷ ಹರಡಿದ ಕಲ್ಲಡ್ಕ ಶ್ರೀರಾಮ ಶಾಲೆಯ ಕ್ರೀಡೋತ್ಸವ
► ಮಕ್ಕಳ ಮನಸ್ಸಲ್ಲಿ ಧಾರ್ಮಿಕ ಹಗೆತನ ಬೆಳೆಸುವ ಷಡ್ಯಂತ್ರ: ಆರೋಪ ► ವೀಡಿಯೊ ವೈರಲ್
ಬಂಟ್ವಾಳ, ಡಿ.15: ಬಾಬರಿ ಮಸೀದಿ-ಅಯೋಧ್ಯೆ ವಿವಾದದ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ನಂತರ ದೇಶದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ದೇಶಾದ್ಯಂತ ಎಲ್ಲಾ ನಾಗರಿಕರು ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸಿ ಸ್ವೀಕರಿಸಿದ್ದಾರೆ. ಆದರೆ ಈ ನಡುವೆ ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದ ಕ್ರೀಡೋತ್ಸವದಲ್ಲಿ ವಿದ್ಯಾರ್ಥಿಗಳು ಬಾಬರಿ ಮಸೀದಿ ಪ್ರತಿಕೃತಿಯನ್ನು ಧ್ವಂಸಗೈಯುವ ವೀಡಿಯೊ ಒಂದು ವೈರಲ್ ಆಗಿದ್ದು, ಭಾರೀ ವಿವಾದ ಸೃಷ್ಟಿಸಿದೆ.
ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ರವಿವಾರ ರಾತ್ರಿ ನಡೆದ ಹೊನಲು ಬೆಳಕಿನ ಕ್ರೀಡೋತ್ಸವದ ವೇಳೆ ಬಾಬರಿ ಮಸೀದಿಯನ್ನು ಧ್ವಂಸಗೈಯುವ ಅಣಕು ಪ್ರದರ್ಶನವನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. ಈ ಸಂದರ್ಭ ವಿದ್ಯಾರ್ಥಿಗಳು 'ರಾಮ ಮಂದಿರ್ ವಹೀ ಬನೇಂಗಿ', 'ಜೈ ಶ್ರೀರಾಂ' ಎನ್ನುವ ಘೋಷಣೆಗಳನ್ನು ಕೂಗಿದರು.
ಕ್ರೀಡೋತ್ಸವದಲ್ಲಿ ಬಾಬರಿ ಮಸೀದಿ ಧ್ವಂಸದ ವೀಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಿಂದುತ್ವದ ಹೆಸರಿನಲ್ಲಿ ಮುಗ್ದ ಮಕ್ಕಳ ಮನಸಿನಲ್ಲಿ ಕೋಮುದ್ವೇಷ ಮೂಡಿಸುವ, ಶಿಕ್ಷಣ ಸಂಸ್ಥೆಯೊಂದರಲ್ಲೇ ಧರ್ಮಗಳ ನಡುವ ವಿಷಬೀಜ ಬಿತ್ತುವ ಕೆಲಸ ಇದಾಗಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.