ಚಿತ್ರಸಂತೆಗೆ ಚಿತ್ರಕಲಾ ಪರಿಷತ್ತು ಸಿದ್ಧತೆ: ಜನವರಿ 5 ರಿಂದ ಚಿತ್ರಸಂತೆ ಆರಂಭ
ಬೆಂಗಳೂರು, ಡಿ.17: ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಹೆಸರಾಂತ ಚಿತ್ರಕಲಾವಿದರ ಸಮಾಗಮಕ್ಕೆ ವೇದಿಕೆ ಅಣಿಗೊಂಡಿದೆ. ಜನವರಿ 5 ರಂದು 17ನೇ ಆವೃತ್ತಿಯ ‘ಬೆಂಗಳೂರು ಚಿತ್ರಸಂತೆ’ ನಡೆಸಲು ಕರ್ನಾಟಕ ಚಿತ್ರಕಲಾ ಪರಿಷತ್ತು ಸಿದ್ಧತೆ ನಡೆಸಿದೆ.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಕಳೆದ ಬಾರಿಯ ಚಿತ್ರಸಂತೆಯನ್ನು ಗಾಂಧೀಜಿ ಅವರಿಗೆ ಅರ್ಪಣೆ ಮಾಡಲಾಗಿತ್ತು. ಹಾಗೆಯೇ ಈ ಬಾರಿಯ ಚಿತ್ರಸಂತೆಯನ್ನು ದೇಶದ ಅನ್ನದಾತನಿಗೆ ಅರ್ಪಿಸಲು ಕರ್ನಾಟಕ ಚಿತ್ರಕಲಾ ಪರಿಷತ್ತು ತೀರ್ಮಾನಿಸಿದೆ. ಕಳೆದ ಬಾರಿಯೇ ರೈತರಿಗೆ ಇಲ್ಲವೆ ಮಹಿಳೆಯರಿಗೆ ಚಿತ್ರಸಂತೆಯನ್ನು ಅರ್ಪಣೆ ಮಾಡಬೇಕು ಎಂಬ ತೀರ್ಮಾನವಾಗಿತ್ತು. ಆದರೆ ಗಾಂಧೀಜಿ ಅವರ 150ನೇ ಜಯಂತಿ ಹಿನ್ನೆಲೆಯಲ್ಲಿ ಆ ತೀರ್ಮಾನದಿಂದ ಹಿಂದೆ ಸರಿಯಲಾಗಿತ್ತು. ಆ ಹಿನ್ನೆಲೆಯಲ್ಲಿ ಈ ಬಾರಿ ಅನ್ನದಾತರಿಗೆ ಅರ್ಪಿಸಲು ತೀರ್ಮಾನಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹಿಂದಿನ ಚಿತ್ರಸಂತೆಗಳಲ್ಲಿ ಬೇಡಿಕೆಯುಳ್ಳ ಹಾಗೂ ಪ್ರಸಿದ್ಧ ಕಲಾವಿದರಿಗೆ ಸೂಕ್ತವಾದ ಸ್ಥಳ ಸಿಗುತ್ತಿಲ್ಲ ಎಂಬ ಕೊರಗಿತ್ತು. ಅದನ್ನು ಹೊಗಲಾಡಿಸುವ ನಿಟ್ಟಿನಲ್ಲಿ ಪರಿಷತ್ತು ಈ ಬಾರಿ ವಿಶಿಷ್ಟ ಪ್ರಯೋಗಕ್ಕೆ ಮುಂದಾಗಿದೆ. ಹೆಸರಾಂತ ಕಲಾವಿದರಿಗಾಗಿಯೇ ಒಂದು ಪ್ರತ್ಯೇಕ ರಸ್ತೆಯನ್ನೇ ನಿಗದಿಪಡಿಸಲು ಚಿತ್ರಕಲಾ ಪರಿಷತ್ತು ನಿರ್ಧರಿಸಿದೆ.
2400 ಸಾವಿರ ಕಲಾವಿದರಿಂದ ಅರ್ಜಿ: ಬೆಂಗಳೂರು ಚಿತ್ರಸಂತೆಯಲ್ಲಿ ಭಾಗವಹಿಸಲು ಕಾಶ್ಮೀರ, ಮಧ್ಯಪ್ರದೇಶ, ದಿಲ್ಲಿ, ರಾಜಸ್ತಾನ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಮತ್ತು ತಮಿಳುನಾಡು ಸೇರಿದಂತೆ 16 ರಾಜ್ಯಗಳ ಕಲಾವಿದರು ಪ್ರತಿ ವರ್ಷ ಚಿತ್ರಸಂತೆಯಲ್ಲಿ ಭಾಗವಹಿಸುತ್ತಾರೆ. ಈ ಬಾರಿ ಸುಮಾರು 2400 ಅರ್ಜಿಗಳು ಕಲಾವಿದರಿಂದ ಬಂದಿವೆ. ಇದರಲ್ಲಿ ಕೇವಲ 1200 ರಿಂದ 1300 ಕಲಾವಿದರಿಗೆ ಅವಕಾಶ ನೀಡಲಾಗುತ್ತದೆ ಎಂದು ಪರಿಷತ್ತಿನ ಅಧಿಕಾರಿಗಳು ತಿಳಿಸಿದ್ದಾರೆ.
3 ಕೋಟಿ ರೂ.ವಹಿವಾಟು ನಿರೀಕ್ಷೆ
ಹಲವು ಕಲಾವಿದರು ಚಿತ್ರಸಂತೆಯಲ್ಲಿ ಭಾಗವಹಿಸುವ ಸಲುವಾಗಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಪಶ್ಚಿಮ ಬಂಗಾಳದ ಕೊಲ್ಕತ್ತಾ ಭಾಗದ ಕಲಾವಿದರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಕಳೆದ ಬಾರಿಯ ಚಿತ್ರಸಂತೆಗೆ ಸುಮಾರು 3 ಲಕ್ಷ ಜನರು ಆಗಮಿಸಿದ್ದು, 2.5 ಕೋಟಿ.ರೂ. ವಹಿವಾಟು ನಡೆದಿತ್ತು. ಈ ಬಾರಿ 3 ಕೋಟಿ ರೂ. ವಹಿವಾಟಿನ ನಿರೀಕ್ಷೆ ಇದೆ ಎಂದು ಪರಿಷತ್ತಿನ ಅಧ್ಯಕ್ಷರು ಮಾಹಿತಿ ನೀಡಿದ್ದಾರೆ.
ವಿಶೇಷ ಚೇತನರಿಗೂ ಮನ್ನಣೆ
ಚಿತ್ರಸಂತೆಯಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ 1,600 ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗುವುದು. ವಿಶೇಷ ಚೇತನರಿಗೆ ಮತ್ತು ಹಿರಿಯ ಕಲಾವಿದರಿಗೆ ವಿಶೇಷ ಕಾಳಜಿ ತೋರಲಾಗುವುದು. ಈ ಬಾರಿ ಕ್ರೆಸೆಂಟ್ ರಸ್ತೆಯ ಕೆಲವು ಪುಟಾಣಿ ಒಳರಸ್ತೆಗಳನ್ನೂ ಚಿತ್ರಸಂತೆಗೆ ಬಳಸಿಕೊಳ್ಳಲಾಗುವುದು.
ಕಳೆದ ಬಾರಿಯ ಬೆಂಗಳೂರು ಚಿತ್ರಸಂತೆ ಗಾಂಧೀಜಿ ಪರಿಕಲ್ಪನೆಯಲ್ಲಿ ಮೂಡಿಬಂದಿತ್ತು. ಈ ಬಾರಿಯ ಚಿತ್ರಸಂತೆಯನ್ನು ದೇಶದ ಅನ್ನದಾತರಿಗೆ ಅರ್ಪಿಸಲಾಗುವುದು.
-ಬಿ.ಎಲ್.ಶಂಕರ್, ಅಧ್ಯಕ್ಷರು, ಕರ್ನಾಟಕ ಚಿತ್ರಕಲಾ ಪರಿಷತ್