ಬೆಹಮಾಯಿ ಹತ್ಯಾಕಾಂಡದ ಕೇಸ್ ಡೈರಿ ನಾಪತ್ತೆ :ನ್ಯಾಯಾಧೀಶರಿಂದ ತೀರ್ಪು ಮುಂದೂಡಿಕೆ
ಕಾನ್ಪುರ,ಜ.18: ಸುಮಾರು ನಾಲ್ಕು ದಶಕಗಳ ಹಿಂದೆ ಢಕಾಯಿತ ರಾಣಿ ಪೂಲನ್ ದೇವಿಯ ತಂಡ ನಡೆಸಿದ ಬೆಹಮಾಯಿ ಹತ್ಯಾಕಾಂಡದ ಕೇಸ್ ಡೈರಿ ಶನಿವಾರ ನಾಪತ್ತೆಯಾಗಿದೆ. ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಾಲಯವು ಇಂದು ತೀರ್ಪು ನೀಲಿತ್ತು. ಆದರೆ ಇದೀಗ ಡೈರಿ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅದು ತೀರ್ಪು ಘೋಷಣೆಯನ್ನು ಜನವರಿ 24ಕ್ಕೆ ಮುಂದೂಡಿದೆ.
ತೀರ್ಪು ನೀಡುವ ಸಮಯದಲ್ಲಿಯೇ ಕೇಸ್ ಡೈರಿ ಕಾಣೆಯಾಗಿರುವುದಕ್ಕಾಗಿ ವಿಶೇಷ ನ್ಯಾಯಾಧೀಶ ಸುಧೀರ್ ಕುಮಾರ್ ಅವರು ನ್ಯಾಯಾಲಯದ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು ಹಾಗೂ ಜನವರಿ 24ರಂದು ಡೈರಿಯನ್ನು ಹಾಜರುಪಡಿಸುವಂತೆ ತಾಕೀತು ಮಾಡಿದರು.
1981ರ ಫೆಬ್ರವರಿ 14ರಂದು ನಡೆದ ಬೆಹಮಾಯಿ ಹತ್ಯಾಕಾಂಡದಲ್ಲಿ 20 ಮಂದಿ ಸಾವನ್ನಪ್ಪಿದ್ದರು. ಪ್ರಕರಣದಲ್ಲಿ ಆರೋಪಿಗಳ ಪೈಕಿ ಪೊಷಾ, ಭಿಕಾ, ವಿಶ್ವನಾಥ ಹಾಗೂ ಶ್ಯಾಮ್ ಬಾಬು ಮಾತ್ರವೇ ಬದುಕುಳಿದಿದ್ದಾರೆ. ಪೋಷಾ ಮಾತ್ರ ಈಗಲೂ ಜೈಲಿನಲ್ಲಿದ್ದನಾದರೂ, ಉಳಿದವರು ಜಾಮೀನು ಬಿಡುಗಡೆಯಲ್ಲಿದ್ದಾರೆ. ಮಾನ್ಸಿಂಗ್ ಸೇರಿದಂತೆ ಇತರ ಮೂವರು ಆರೋಪಿ ಢಕಾಯಿತರು ತಲೆ ಮರೆಸಿಕೊಂಡಿದ್ದಾರೆ.