ನಾವು ಆಯ್ಕೆಗಳನ್ನು ಇಷ್ಟ ಪಡುತ್ತೇವೆ: ರವಿಶಾಸ್ತ್ರಿ
ಮುಂಬೈ, ಜ.22: ಲೋಕೇಶ್ ರಾಹುಲ್ ಅವರನ್ನು ಆಸ್ಟ್ರೇಲಿಯ ವಿರುದ್ಧ ಏಕದಿನ ಸರಣಿಯಲ್ಲಿ ವಿಕೆಟ್ ಕೀಪರ್ ಆಗಿ ಕಣಕ್ಕಿಳಿಸಿರುವ ತಂಡದ ನಿಲುವಿನ ಬಗ್ಗೆ ಬಲವಾಗಿ ಸಮರ್ಥಿಸಿಕೊಂಡಿರುವ ಟೀಮ್ ಇಂಡಿಯಾದ ಪ್ರಧಾನ ಕೋಚ್ ರವಿ ಶಾಸ್ತ್ರಿ ಅವರು ತಂಡದ ಅಗತ್ಯಗಳಿಗಾಗಿ ನಾವು ಆಯ್ಕೆಗಳನ್ನು ಇಷ್ಟಪಡುತ್ತೇವೆ ಎಂದು ಹೇಳಿದ್ದಾರೆ.
ಸುದ್ದಿ ಸಂಸ್ಥೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ರವಿ ಶಾಸ್ತ್ರಿ ಅವರು ಮುಂಬರುವ ಟ್ವೆಂಟಿ-20 ವಿಶ್ವಕಪ್ಗೆ ತಂಡದ ತಯಾರಿ, ತಂಡದ ಸಂಸ್ಕೃತಿ ಮತ್ತು ತಂಡದ ಆಟಗಾರರು ಅನಿರೀಕ್ಷಿತವಾಗಿ ಗಾಯದ ಸಮಸ್ಯೆ ಎದುರಿಸುತ್ತಿರುವ ವಿಚಾರದ ಬಗ್ಗೆ ಮಾತನಾಡಿದರು.
ಟಾಸ್ ಗೆಲುವು ನಿರ್ಣಾಯಕವಲ್ಲ. ನಾವು ಪ್ರತಿಯೊಂದು ತಂಡಗಳ ವಿರುದ್ದ ವಿಭಿನ್ನ ಪರಿಸ್ಥಿತಿಯಲ್ಲಿ ಚೆನ್ನಾಗಿ ಆಡುತ್ತಿದ್ದೇವೆ. ನಮ್ಮ ಮುಂದಿನ ಗುರಿ ವಿಶ್ವಕಪ್ ಗೆಲ್ಲುವುದಾಗಿದೆ. ಆ ಮಹತ್ವಾಕಾಂಕ್ಷೆಯನ್ನು ಈಡೇರಿಸಲು ನಾವು ಎಲ್ಲವನ್ನು ಮಾಡುತ್ತೇವೆ ಎಂದು ಶಾಸ್ತ್ರಿ ಭಾರತ ತಂಡ ನ್ಯೂಝಿಲ್ಯಾಂಡ್ ಪ್ರವಾಸಕ್ಕೆ ಹೊರಡುವ ಮುನ್ನ ಹೇಳಿದರು.
ಭಾರತವು ಐದು ಟ್ವೆಂಟಿ-20 ಅಂತರ್ರಾಷ್ಟ್ರೀಯ ಪಂದ್ಯಗಳು, ಮೂರು ಏಕದಿನ ಪಂದ್ಯಗಳು ಮತ್ತು ಎರಡು ಟೆಸ್ಟ್ ಪಂದ್ಯಗಳನ್ನು ನ್ಯೂಝಿಲ್ಯಾಂಡ್ನಲ್ಲಿ ಆಡಲಿದೆ.
ಜನವರಿ 24ರಿಂದ ಸೀಮಿತ ಓವರ್ಗಳ ಸರಣಿ ಆರಂಭವಾಗಲಿದೆ. ದಕ್ಷಿಣ ಆಫ್ರಿಕಾ ವಿರುದ್ದ ಏಕದಿನ ಸರಣಿ ಮಾರ್ಚ್ನಲ್ಲಿ ನಡೆಯಲಿದೆ.
ಈ ತಂಡದ ವಿಶಿಷ್ಟ ಲಕ್ಷಣವೆಂದರೆ ಆಟಗಾರರು ಯಶಸ್ಸನ್ನು ಆನಂದಿಸುವುದಾಗಿದೆ ಎಂದು ಶಾಸ್ತ್ರಿ ಹೇಳಿದರು.
ನಮ್ಮ ನಿಘಂಟಿನಲ್ಲಿ ‘ನಾನು’ ಎಂಬ ಪದ ಇಲ್ಲ. ಅದು ‘ನಾವು’. ಅದನ್ನೇ ಈ ತಂಡವು ಬಯಸುತ್ತದೆ. ಇಬ್ಬರು ಯಶಸ್ಸು ಗಳಿಸಿದಾಗ ಎಲ್ಲರು ಅವರನ್ನು ಅಭಿನಂದಿಸುತ್ತಾರೆ. ಇದು ತಂಡದ ಗೆಲುವಾಗಿದೆ ಎಂದು ಅವರು ಹೇಳಿದರು.
ಪೂರ್ಣ ಸಾಮರ್ಥ್ಯದ ಆಸ್ಟ್ರೇಲಿಯ ತಂಡದ ವಿರುದ್ಧ 2-1 ಸರಣಿಯ ಗೆಲುವು ಭಾರತೀಯ ತಂಡದ ಮಾನಸಿಕ ಸಾಮರ್ಥ್ಯದ ಪ್ರತಿಬಿಂಬವಾಗಿತ್ತು. ಮೊದಲ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಲಾಗಿತ್ತು. ಆದರೆ ಗೆಲ್ಲಲು ಸಾಧ್ಯವಾಗಲಿಲ್ಲ. ಆಸ್ಟ್ರೇಲಿಯ ಸರಣಿಯು ಮಾನಸಿಕ ಶಕ್ತಿ ಮತ್ತು ಒತ್ತಡದಲ್ಲಿ ಆಡುವ ಸಾಮರ್ಥ್ಯಕ್ಕೆ ಪುರಾವೆಯಾಗಿತ್ತು. ವಾಂಖೆಡೆಯಲ್ಲಿ ಮೊದಲ ಪಂದ್ಯದಲ್ಲಿ ಭಾರತ ಸೋಲು ಅನುಭವಿಸಿದ ಬಳಿಕ ತಿರುಗೇಟು ನೀಡಿತ್ತು. ಈ ತಂಡವು ವರ್ತಮಾನದಲ್ಲಿ ವಾಸಿಸುತ್ತಿದೆ. ಹಿಂದೆ ಏನಾಗಿದೆಯೋ ಅದು ಇತಿಹಾಸವಾಗಿದೆ. ನಾವು ಹಿಂದೆ ಉತ್ತಮವಾಗಿ ಮಾಡಿದ್ದನ್ನು ಭವಿಷ್ಯದಲ್ಲಿಯೂ ಸಹ ನೋಡುತ್ತೇವೆ.
ಕೆ.ಎಲ್. ರಾಹುಲ್ ಅವರು ವಿಕೆಟ್ ಕೀಪರ್ ಸ್ಥಾನಕ್ಕೆ ಒಂದು ಆಯ್ಕೆಯಾಗಿದೆ ಎಂದು ನಾಯಕ ವಿರಾಟ್ ಕೊಹ್ಲಿ ಈಗಾಗಲೇ ಹೇಳಿದ್ದಾರೆ ಮತ್ತು ರಾಹುಲ್ ಅವರಂತಹ ಪ್ರತಿಭಾವಂತ ಆಟಗಾರನನ್ನು ತಂಡಕ್ಕೆ ಪಡೆದಿರುವುದಕ್ಕೆ ಸಂತೋಷವಾಗಿದೆ. ನಾವು ಆಯ್ಕೆಗಳನ್ನು ಪ್ರೀತಿಸುತ್ತೇವೆ ಎಂದು ಶಾಸ್ತ್ರಿ ಅಭಿಪ್ರಾಯ ವ್ಯಕ್ತಪಡಿಸಿದರು.
ಭುಜಕ್ಕೆ ಗಾಯವಾಗಿರುವಕಾರಣದಿಂದಾಗಿ ನ್ಯೂಝಿ ಲ್ಯಾಂಡ್ ಪ್ರವಾಸದಿಂದ ಶಿಖರ್ ಧವನ್ ಹೊರಗುಳಿದಿ ರುವುದು ದುರದೃಷ್ಟಕರ ಎಂದು ಹೇಳಿದರು.