ಎಸ್ಡಿಪಿಐ ವಿರುದ್ಧ 'ಸುಳ್ಳು ಸುದ್ದಿ' ಬಿತ್ತರಿಸಿದ ಆರೋಪ: 12 ಮಾಧ್ಯಮಗಳಿಗೆ ನ್ಯಾಯಾಲಯ ತುರ್ತು ನೋಟಿಸ್
ಬೆಂಗಳೂರು, ಜ.24: ಬೆಂಗಳೂರಿನಲ್ಲಿ ಸಿಎಎ ಪರ ನಡೆದ ಕಾರ್ಯಕ್ರಮದ ಸಂದರ್ಭದಲ್ಲಿ ನಡೆದಿದೆ ಎನ್ನಲಾದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಪಕ್ಷದ ಮೇಲೆ ನಿರಾಧಾರ ಆರೋಪ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸಿದ ಆರೋಪ ಹಿನ್ನೆಲೆ ನಗರದ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರು 12 ಮಾಧ್ಯಮಗಳಿಗೆ ತುರ್ತು ನೋಟಿಸ್ ಜಾರಿಗೊಳಿಸಿದ್ದಾರೆ.
ನಿರಾಧಾರ ಆರೋಪ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸಿ ಸಮಾಜದ ಸ್ವಾಸ್ಥ್ಯವನ್ನು ಕೆಡಿಸಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿ ಎಸ್ಡಿಪಿಐ ಬೆಂಗಳೂರು ಜಿಲ್ಲಾ ಕಾರ್ಯದರ್ಶಿ ಮತ್ತು ಮಾಧ್ಯಮ ಉಸ್ತುವಾರಿ ಮುಝಮ್ಮಿಲ್ ಪಾಶಾ ನ್ಯಾಯಾಲದಲ್ಲಿ ದಾವೆ ಹೂಡಿದ್ದರು. ಸಲ್ಲಿಸಲಾಗಿದ್ದ ದಾವೆಯನ್ನು ಪರಿಗಣಿಸಿ ನಗರದ ಸಿವಿಲ್ ನ್ಯಾಯಾಲಯ 12 ಮಾಧ್ಯಮಗಳಿಗೆ ತುರ್ತು ನೋಟಿಸ್ ಜಾರಿಗೊಳಿಸಿದೆ.
ದೃಶ್ಯ ಮಾಧ್ಯಮಗಳಾದ ಸುವರ್ಣ ನ್ಯೂಸ್, ಪಬ್ಲಿಕ್ ಟಿವಿ, ಟಿವಿ9, ಬಿಟಿವಿ, ನ್ಯೂಸ್ 18 ಕನ್ನಡ, ಪವರ್ ಟಿವಿ, ನ್ಯೂಸ್5 ಕನ್ನಡ ಹಾಗೂ ಪತ್ರಿಕಾ ಮಾಧ್ಯಮಗಳಾದ ಕನ್ನಡ ಪ್ರಭ, ವಿಜಯ ಕರ್ನಾಟಕ, ಉದಯವಾಣಿ, ವಿಜಯವಾಣಿ ಮತ್ತು ಹೊಸದಿಗಂತ ಪತ್ರಿಕೆಗಳಿಗೆ ನ್ಯಾಯಾಲಯ ನೋಟಿಸು ಜಾರಿಗೊಳಿಸಿದೆ.
ಅರ್ಜಿದಾರರ ಪರವಾಗಿ ನ್ಯಾಯವಾದಿಗಳಾದ ಮೋಹನ್ ಕುಮಾರ್, ಅಬ್ದುಲ್ ಮಜೀದ್ ಖಾನ್, ಅನ್ಸಾರ್ ಮೂಲಕ ದಾವೆ ಹೂಡಲಾಗಿದೆ.