99 ಜನರು ಉಣ್ಣುವ ಅನ್ನ ಒಬ್ಬನ ತಟ್ಟೆಯಲ್ಲಿ!
ಈ ದೇಶದ ಬಡತನಕ್ಕೆ ಜನಸಂಖ್ಯೆ ಕಾರಣ ಎನ್ನುವ ಹಳೆಯ ಸಾಂಪ್ರದಾಯಿಕ ವಾದ ಇನ್ನೂ ಚಾಲ್ತಿಯಲ್ಲಿದೆ. ಜನಸಂಖ್ಯೆಯ ಕುರಿತಂತೆ ಆರೆಸ್ಸೆಸ್ನೊಳಗೇ ಎರಡು ಅಭಿಪ್ರಾಯಗಳಿವೆ. ಒಂದು ಗುಂಪು ಹಿಂದೂ ಧರ್ಮದ ಉಳಿವಿಗಾಗಿ ‘ಹಿಂದೂಗಳು ಹತ್ತು-ಹದಿನಾಲ್ಕು ಮಕ್ಕಳನ್ನು ಹುಟ್ಟಿಸಬೇಕು’ ಎಂದು ವಾದಿಸುತ್ತದೆ. ಇನ್ನೊಂದು ಗುಂಪು ಭಾರತದ ಭವಿಷ್ಯದ ದೃಷ್ಟಿಯಿಂದ ‘ಒಂದು ಕುಟುಂಬ ಎರಡು ಮಕ್ಕಳಿಗಿಂತ ಹೆಚ್ಚು ಹೊಂದದಂತೆ ಕಾನೂನು ತರಬೇಕು’ ಎಂದು ಒತ್ತಾಯಿಸುತ್ತದೆ. ಸರಕಾರದೊಳೂ ಇದೇ ರೀತಿಯ ಭಿನ್ನಮತಗಳಿವೆ. ಈ ದೇಶದ ಆರ್ಥಿಕತೆಗೂ ಜನಸಂಖ್ಯೆಗೂ ತಳಕು ಹಾಕಿ ಹಲವು ದಶಕಗಳಿಂದ ಚರ್ಚೆಗಳು ನಡೆಯುತ್ತಿವೆಯಾದರೂ, ಬಿಜೆಪಿ ಮತ್ತು ಸಂಘಪರಿವಾರ ಜನಸಂಖ್ಯೆಯ ಕುರಿತ ನೀತಿಯನ್ನು ‘ಮುಸ್ಲಿಮ್ ದ್ವೇಷ’ದ ಭಾಗವಾಗಿಯಷ್ಟೇ ನೋಡಿದೆ. ಒಂದು ವೇಳೆ ಹೀಗೇ ಬಿಟ್ಟರೆ ಹಿಂದೂಗಳ ಸಂಖ್ಯೆ ಕಡಿಮೆಯಾಗುತ್ತಾ, ಮುಸ್ಲಿಮರ ಸಂಖ್ಯೆ ಹೆಚ್ಚಾಗಬಹುದು ಎನ್ನುವುದು ಸಂಘಪರಿವಾರದ ಆತಂಕ ಅಥವಾ ಅಂತಹದೊಂದು ಆತಂಕವನ್ನು ದೇಶದ ಜನರ ಮುಂದೆ ಬಿತ್ತುತ್ತಾ ತನ್ನ ರಾಜಕೀಯ ಉದ್ದೇಶಗಳನ್ನು ಸಾಧಿಸುತ್ತಾ ಬಂದಿದೆ. ಇದನ್ನು ಎದುರಿಸಲು ಸಂಘಪರಿವಾರದ ಬಳಿ ಎರಡೇ ತಂತ್ರಗಳಿರುವುದು. ಒಂದು, ‘ಹಿಂದೂಗಳು ಹತ್ತು ಮಕ್ಕಳನ್ನು ಹೆರುವುದು’ ಅಥವಾ ಈ ದೇಶದ ಪ್ರಜೆಗಳು ಯಾರೂ ಎರಡಕ್ಕಿಂತ ಅಧಿಕ ಮಕ್ಕಳನ್ನು ಹೊಂದ ಬಾರದು ಎಂಬ ಕಾನೂನು ತರುವುದು. ಮೊದಲನೆಯ ತಂತ್ರ ಅಸಾಧ್ಯ ಎನ್ನುವುದು ಸಂಘಪರಿವಾರದ ನಾಯಕರಿಗೆ ಗೊತ್ತಿದೆ. ಸ್ವತಃ ಮದುವೆಯಾಗದೇ ಸಾಂಸಾರಿಕವಾಗಿ ದೂರ ಉಳಿದವರು ‘ಹೆಚ್ಚು ಮಕ್ಕಳನ್ನು ಹೆರಬೇಕು’ ಎಂದು ಕರೆ ಕೊಟ್ಟರೆ ಅದನ್ನು ಯಾರಾದರೂ ಯಾಕೆ ಗಂಭೀರವಾಗಿ ತೆಗೆದುಕೊಳ್ಳುತ್ತಾರೆ? ಇನ್ನುಳಿದಿರುವುದು ಎರಡು ಮಕ್ಕಳನ್ನು ಹೊಂದುವಂತೆ ಕಾನೂನನ್ನು ಜಾರಿಗೊಳಿಸುವುದು. ಈ ಬಗ್ಗೆ ಬಾಬಾ ರಾಮ್ದೇವ್ ಸೇರಿದಂತೆ ಹಲವು ಸ್ವಯಂಘೋಷಿತ ಸ್ವಾಮೀಜಿಗಳು, ಸಂಘಪರಿವಾರದವರು ಈಗಾಗಲೇ ಸರಕಾರವನ್ನು ಒತ್ತಾಯಿಸಿದ್ದಾರೆ.
ಮೊತ್ತ ಮೊದಲು ಈ ಕಾನೂನನ್ನು ಯಾಕೆ ಜಾರಿಗೊಳಿಸಬೇಕು ? ಎನ್ನುವ ಬಗ್ಗೆ ನಮಗೆ ಸ್ಪಷ್ಟತೆ ಇರಬೇಕು. ಮುಸ್ಲಿಮರ ಜನಸಂಖ್ಯೆ ಹೆಚ್ಚಳವಾಗುವುದನ್ನು ತಡೆಯುವ ಉದ್ದೇಶವನ್ನು ಇದು ಹೊಂದಿದೆಯೋ ಅಥವಾ ಇದಕ್ಕೆ ಆರ್ಥಿಕ ಕಾರಣಗಳೇನಾದರೂ ಇದೆಯೇ? ಇಂದು ದೇಶದಲ್ಲಿ ಕುಟುಂಬ ಯೋಜನೆ ಪದ್ಧ್ದತಿ ಜಾರಿಯಲ್ಲಿರುವುದು ಐಚ್ಛಿಕವಾಗಿ. ಯಾವುದೇ ಧರ್ಮಗಳಿಗೆ ನೀವು ಇಷ್ಟೇ ಮಕ್ಕಳನ್ನು ಹೊಂದಬೇಕು, ಹೊಂದ ಬಾರದು ಎನ್ನುವುದನ್ನು ಕಡ್ಡಾಯಗೊಳಿಸಿಲ್ಲ. ಆದರೂ ಮುಸ್ಲಿಮರಲ್ಲಿಯೂ ಜನಸಂಖ್ಯಾ ದರ ಇಳಿಕೆಯಾಗಿರುವುದನ್ನು ವರದಿಗಳು ಹೇಳುತ್ತಿವೆೆ. ಇದೇ ಸಂದರ್ಭದಲ್ಲಿ ದೇಶದ ಹಿತಾಸಕ್ತಿಯಿಂದ ಒಂದು ಕುಟುಂಬಕ್ಕೆ ಎರಡು ಮಕ್ಕಳನ್ನಷ್ಟೇ ಕಡ್ಡಾಯಗೊಳಿಸಬೇಕು ಎಂದು ಒತ್ತಾಯಿಸಿದರೆ ಆ ಕುರಿತಂತೆ ಗಂಭೀರವಾಗಿ ಚರ್ಚೆ ಮಾಡಬಹುದು. ಇಷ್ಟಕ್ಕೂ ಇಂತಹದೊಂದು ಕಾನೂನನ್ನು ಚೀನಾ ಈವರೆಗೆ ಅಳವಡಿಸಿಕೊಂಡಿತ್ತು. ಜನಸಂಖ್ಯೆಯ ಇಳಿಕೆಯಲ್ಲಿ ಅದು ಯಶಸ್ಸನ್ನೂ ಕಂಡಿತು. ಆದರೆ ಇದೇ ಸಂದರ್ಭದಲ್ಲಿ ಚೀನಾ ಗಂಭೀರ ಸಮಸ್ಯೆಯೊಂದನ್ನು ಎದುರಿಸುತ್ತಿದೆ. ಇಂದು ಚೀನಾದಲ್ಲಿ ಯುವಕರ ಸಂಖ್ಯೆಗಿಂತ ವೃದ್ಧರ ಸಂಖ್ಯೆ ಹೆಚ್ಚಿವೆ. ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಬೇಕಾದ ಯುವ ಸಂಪನ್ಮೂಲದ ಕೊರತೆಯನ್ನು ಚೀನಾ ಅನುಭವಿಸುತ್ತಿದೆ. ಆದುದರಿಂದಲೇ ತನ್ನ ಜನಸಂಖ್ಯಾ ನಿಯಂತ್ರಣ ನೀತಿಯಿಂದ ಹಿಂದೆ ಸರಿಯುವ ನಿರ್ಧಾರಕ್ಕೆ ಬಂದಿದೆ.
ಆರೋಗ್ಯಪೂರ್ಣವಾಗಿರುವ ಜನಸಂಖ್ಯೆಯೂ ಒಂದು ದೇಶದ ಸಂಪತ್ತು ಎನ್ನುವುದರಲ್ಲಿ ಯಾರಿಗೂ ಭಿನ್ನಾಭಿಪ್ರಾಯಗಳಿಲ್ಲ. ಜನಸಂಖ್ಯೆ ಯಾವಾಗ ಸಮಸ್ಯೆಯಾಗುತ್ತದೆ ಎಂದರೆ, ದೇಶದ ನೈಸರ್ಗಿಕ ಸಂಪನ್ಮೂಲವನ್ನು ಮೀರಿ ಅದು ಸ್ಫೋಟಗೊಂಡಾಗ. ಈ ದೇಶದಲ್ಲಿರುವ ಬಡತನಕ್ಕೆ ನಮ್ಮ ಸಂಪನ್ಮೂಲಕ್ಕಿಂತ ಜನಸಂಖ್ಯೆ ಅಧಿಕವಾಗಿರುವುದು ಕಾರಣವೇ? ಎಂಬ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಳ್ಳಬೇಕಾಗಿದೆ. ಇತ್ತೀಚೆಗೆ ಮಾನವಹಕ್ಕುಗಳಿಗಾಗಿ ಶ್ರಮಿಸುತ್ತಿರುವ ಸರಕಾರೇತರ ಸಂಸ್ಥೆ ಆಕ್ಸ್ಸ್ಫಾಮ್ ತನ್ನ ಅಧ್ಯಯನ ವರದಿ ‘ಟೈಮ್ ಟು ಕೇರ್’ನಲ್ಲಿ ಆಘಾತಕಾರಿಯಾದ ಅಂಶವೊಂದನ್ನು ಬಹಿರಂಗ ಪಡಿಸಿತು. ಭಾರತದ ಕೇವಲ 63 ಶತಕೋಟ್ಯಧಿಪತಿಗಳ ಒಟ್ಟು ಸಂಪತ್ತು 2018-19ನೇ ಸಾಲಿನ ಕೇಂದ್ರ ಬಜೆಟ್ಗಿಂತ ಹೆಚ್ಚಿದೆ ಎಂದು ಅದು ಹೇಳಿತು. ಭಾರತದ ಬಜೆಟ್ನ ವೆಚ್ಚವೇ 24,42,200 ಕೋಟಿ ರೂ. ಈ ದೇಶದ 95.3 ಕೋಟಿ ಜನರ ಒಟ್ಟು ಸಂಪತ್ತಿನ ನಾಲ್ಕು ಪಟ್ಟು ಸಂಪತ್ತು ಈ ದೇಶದ ಶೇ. 1ರಷ್ಟಿರುವ ಜನರ ಕೈಯಲ್ಲಿದೆ ಎಂದೂ ಇದೇ ವರದಿ ಹೇಳಿದೆ. ಈ ದೇಶದ ಸಮಸ್ಯೆ ಜನಸಂಖ್ಯೆಯಲ್ಲ, ಸಂಪನ್ಮೂಲಗಳ ಅಸಮಾನ ಹಂಚಿಕೆ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಒಬ್ಬನ ತಟ್ಟೆಯಲ್ಲಿ ನೂರು ಜನರು ಉಣ್ಣುವಷ್ಟು ಅನ್ನ ಬಿದ್ದಿದೆ. ಉಳಿದ 99 ಜನರ ತಟ್ಟೆ ಖಾಲಿಯಾಗಿದೆ ಎಂದರೆ ಈ 99 ಜನರು ಅಲ್ಲಿ ಹೆಚ್ಚುವರಿ ಹೊರೆಯಾಗಿದ್ದಾರೆ ಎಂದು ಅರ್ಥವಲ್ಲ. ಜನರ ಸಂಖ್ಯೆ ಕಡಿಮೆ ಇದ್ದಿದ್ದರೆ ಹಸಿವೆ ಇರುತ್ತಿರಲಿಲ್ಲ ಎಂದು ವಾದಿಸುವಂತೆಯೂ ಇಲ್ಲ. ಒಬ್ಬನ ತಟ್ಟೆಯಲ್ಲಿ ಬಿದ್ದಿರುವ ಅನ್ನವನ್ನು ಉಳಿದವರ ತಟ್ಟೆಗೆ ಹಂಚುವುದೇ ಬುದ್ಧಿವಂತಿಕೆ. ಈ ಮೂಲಕ ಎಲ್ಲರ ಹಸಿವೂ ಇಂಗಿದಂತಾಗುತ್ತದೆ. ಮಾತ್ರವಲ್ಲ, ದೇಶದ ಜನಸಂಪನ್ಮೂಲದ ಸದ್ಬಳಕೆಗೂ ಕಾರಣವಾಗುತ್ತದೆ. ಜನಸಂಖ್ಯಾ ನಿಯಂತ್ರಣ ಕಾಯ್ದೆಗೆ ಮೊದಲು ಶೇ. 1ರಷ್ಟು ಜನರ ಕೈಯಲ್ಲಿ ಶೇಖರವಾಗಿರುವ 95.3 ಕೋಟಿ ಜನರ ಸಂಪತ್ತನ್ನು ಸಮಾನವಾಗಿ ಹಂಚುವ ಕೆಲಸ ನಡೆಯಬೇಕು. ಅದು ನಡೆಯಬೇಕಾದರೆ ಈ ದೇಶದ ಆರ್ಥಿಕ ನೀತಿ ಜನಪರವಾಗಿರಬೇಕಾಗುತ್ತದೆ. ಒಂದು ಅಂಶವನ್ನು ಗಮನಿಸಬೇಕು. ನೋಟು ನಿಷೇಧದ ಬಳಿಕ ಈ ದೇಶದ ಬಹುತೇಕ ಸಣ್ಣ ಉದ್ದಿಮೆಗಳು ಸರ್ವನಾಶವಾದವು. ಮಧ್ಯಮ ಗಾತ್ರದ ಉದ್ದಿಮೆಗಳು ನಷ್ಟ ಅನುಭವಿಸುತ್ತಿವೆ. ನಿರುದ್ಯೋಗಗಳು ಹೆಚ್ಚಿವೆ. ಆದರೆ ಇದೇ ಸಂದರ್ಭದಲ್ಲಿ ಅಂಬಾನಿ ಮತ್ತು ಅದಾನಿ ಅವರ ಸಂಪತ್ತಿನಲ್ಲಿ ಹೆಚ್ಚಳವಾಗಿದೆ. ಸರಕಾರದ ಆರ್ಥಿಕ ನೀತಿ ಶೇ. 1 ರಷ್ಟಿರುವ ಶ್ರೀಮಂತರ ಪರವಾಗಿದೆ ಎನ್ನುವುದನ್ನು ಇದು ಹೇಳುತ್ತಿದೆ. ಈ ದೇಶದಲ್ಲಿ 63 ಶತ ಕೋಟ್ಯಧಿಪತಿಗಳಿರುವಾಗಲೇ ಶೇ. 50ಕ್ಕೂ ಅಧಿಕ ಭಾರತೀಯರು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ಜೊತೆಗೆ ದೇಶದಲ್ಲಿ ಹಸಿವಿನಿಂದ ನರಳುತ್ತಿರುವವರ ಸಂಖ್ಯೆ ಹೆಚ್ಚುತ್ತಿವೆ. ಶೇ. 95ರಷ್ಟಿರುವ ಜನಸಂಖ್ಯೆಯನ್ನು ಇಳಿಸುವುದರಿಂದ ಈ ಅಪೌಷ್ಟಿಕತೆಯನ್ನು ತಡೆಯಲಾಗುವುದಿಲ್ಲ್ಲ. ಬದಲಿಗೆ ಶೇ. 1ರಷ್ಟಿರುವ ಜನರ ಸಂಪತ್ತನ್ನು ಸಮಪರ್ಕವಾಗಿ ಹಂಚುವ ವ್ಯವಸ್ಥೆಯಾಗಬೇಕು. ಕಾರ್ಪೊರೇಟ್ ಪರವಾಗಿರುವ ತನ್ನ ನೀತಿಗಳಿಂದ ಸರಕಾರ ಇನ್ನಾದರೂ ಹಿಂದೆ ಸರಿಯಬೇಕು. ಇಲ್ಲವಾದರೆ ಈ ಕೋಟ್ಯಧಿಪತಿಗಳು ಮತ್ತು 95 ಶೇಕಡ ಭಾರತೀಯರ ನಡುವಿನ ಅಂತರ ಇನ್ನಷ್ಟು ಹೆಚ್ಚಾಗಲಿದೆ. ಇದು ಈ ದೇಶವನ್ನು ಉಳ್ಳ ಶೇ. 1 ಮತ್ತು ಇಲ್ಲದ ಶೇ. 95 ಜನರಾಗಿ ಒಡೆಯಬಹುದು. ದೇಶದೊಳಗಿನ ಅರಾಜಕತೆಗೂ ಕಾರಣವಾಗಬಹುದು. ಆದುದರಿಂದ, ಪ್ರಧಾನಮಂತ್ರಿ ಪೌರತ್ವತಿದ್ದುಪಡಿ ಕಾಯ್ದೆಯಂತಹ ಅನಗತ್ಯ ತೌಡುಕುಟ್ಟುವ ಕೆಲಸ ಮಾಡುತ್ತಾ, ತಾನು ದೇಶಕ್ಕಾಗಿ ಶ್ರಮಿಸುತ್ತಿದ್ದೇನೆ ಎಂಬ ಭ್ರಮೆಯನ್ನು ಬಿತ್ತಿದ್ದು ಸಾಕು. ಇನ್ನಾದರೂ ದೇಶದ ಹಳಿತಪ್ಪಿದ ಆರ್ಥಿಕತೆಯನ್ನು ಮೇಲೆತ್ತುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಅದು ಈ ಬಾರಿಯ ಬಜೆಟ್ನಿಂದಲೇ ಆರಂಭವಾಗಲಿ.