ಜೈಲಿನಲ್ಲಿ ಲೈಂಗಿಕ ದೌರ್ಜನ್ಯ ನಡೆದಿದೆ: ನಿರ್ಭಯಾ ಪ್ರಕರಣದ ದೋಷಿ ಮುಕೇಶ್ ಆರೋಪ
ಹೊಸದಿಲ್ಲಿ: ನಿರ್ಭಯಾ ಪ್ರಕರಣದ ದೋಷಿಗಳನ್ನು ಗಲ್ಲಿಗೇರಿಸಲು ಇನ್ನು ಕೆಲವೇ ದಿನಗಳಿವೆಯೆನ್ನುವಾಗ ಆರೋಪಿಗಳಲ್ಲೊಬ್ಬನಾಗಿರುವ ಮುಕೇಶ್ ಸಿಂಗ್ ತನ್ನ ಮೇಲೆ ತಿಹಾರ್ ಜೈಲಿನಲ್ಲಿ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂದು ಆರೋಪಿಸಿದ್ದಾನೆ.
ತಾನು ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಆತ ಕೋರ್ಟಿಗೆ ತನ್ನ ವಕೀಲರ ಮೂಲಕ ಅಪೀಲು ಸಲ್ಲಿಸಿದ್ದ. ಇಂದು ವಿಚಾರಣೆ ವೇಳೆ ವಾದ ಮಂಡಿಸಿದ ಆತನ ವಕೀಲರು ಆತ ಮೊದಲ ಬಾರಿ ತಿಹಾರ್ ಜೈಲಿಗೆ ಬಂದಾಗ ಆತನಿಗೆ ನಿರ್ದಯವಾಗಿ ಹೊಡೆಯಲಾಗಿತ್ತು ಆತನ ಮೇಲೆ ಲೈಂಗಿಕ ಹಲ್ಲೆ ನಡೆಸಲಾಗಿದೆ ಹಾಗೂ ಆತನ ಕ್ಷಮಾದಾನ ಅರ್ಜಿ ತಿರಸ್ಕೃತಗೊಳ್ಳುವ ಮುನ್ನ ಆತನನ್ನು ಏಕಾಂಗಿಯಾಗಿ ಜೈಲಿನ ನಿಯಮಗಳಿಗೆ ವಿರುದ್ಧವಾಗಿ ಇರಿಸಲಾಗಿತ್ತು ಎಂದು ದೂರಿದ್ದಾರೆ.
ಸಿಂಗ್ ಪರ ವಾದಿಸಿದ ಹಿರಿಯ ವಕೀಲೆ ಅಂಜನಾ ಪ್ರಕಾಶ್, ಕ್ಷಮಾದಾನ ಅರ್ಜಿ ಪರಿಶೀಲನೆ ವೇಳೆ ಕೆಲವೊಂದು ಪ್ರಕ್ರಿಯೆಗಳಲ್ಲಿ ಲೋಪವುಂಟಾಗಿದೆ ಹಾಗೂ ಸರಿಯಾಗಿ ಗಮನ ನೀಡಿಲ್ಲ ಎಂದು ದೂರಿದರು.
ಇದನ್ನು ಹೇಗೆ ಹೇಳಲು ಸಾಧ್ಯ ಎಂದು ಜಸ್ಟಿಸ್ ಆರ್ ಬಾನುಮತಿ ಅವರನ್ನೊಳಗೊಂಡ ಪೀಠ ಪ್ರಶ್ನಿಸಿದೆ. ಅಪೀಲಿನ ಕುರಿತಾದ ತೀರ್ಪನ್ನು ನ್ಯಾಯಾಲಯ ನಾಳೆಗೆ ಕಾದಿರಿಸಿದೆ.