ರೈತರು ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತಿಲ್ಲ: ಬಿಎಸ್ವೈ ಬೇಸರ
ಬೆಂಗಳೂರು, ಜ.28: ದೇಶಕ್ಕೆ ಸ್ವಾತಂತ್ರ ಸಿಕ್ಕಿ ಏಳು ದಶಕ ಕಳೆದಿದ್ದರೂ ರೈತರು ನೆಮ್ಮದಿಯಿಂದ ಬದುಕಲು ಇಂದಿಗೂ ಸಾಧ್ಯವಾಗಿಲ್ಲವೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.
ಮಂಗಳಾರ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ವಿಜಯ ಕರ್ನಾಟಕ ಪತ್ರಿಕೆ ಆಯೋಜಿಸಿದ್ದ 'ವಿಕ ಸೂಪರ್ ಸ್ಟಾರ್ ರೈತ-2019’ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹತ್ತಾರು ವರ್ಷಗಳ ಹಿಂದೆಯೇ ರೈತ ಸಮುದಾಯಕ್ಕೆ ಉತ್ತಮ ನೀರಾವರಿ, ಮಾರುಕಟ್ಟೆ ಒದಗಿಸಿದ್ದರೆ, ಉತ್ತಮ ಜೀವನ ನಿರ್ವಹಿಸುವ ರೈತರನ್ನು ನಾವು ನೋಡಬಹುದಾಗಿತ್ತು ಎಂದರು.
ದೇಶದಲ್ಲಿ ಕಾಡುತ್ತಿರುವ ಹಲವು ಸಮಸ್ಯೆಗಳ ನಡುವೆಯೂ ರೈತರು ತಮ್ಮ ಕಾಯಕವನ್ನು ಬಿಡದೆ ಮಾಡುತ್ತಿದ್ದಾರೆ. ಯುವ ಜನತೆಯು ಕೃಷಿ ಕ್ಷೇತ್ರದತ್ತ ಆಕರ್ಷಿತರಾಗುತ್ತಿರುವುದು ಸಂತಸ ತಂದಿದೆ. ಇಂತಹ ರೈತರನ್ನು ಪ್ರೋತ್ಸಾಹಿಸುವುದು ನಮ್ಮೆಲ್ಲರ ಜವಾಬ್ದಾರಿಯೆಂದು ಅವರು ಹೇಳಿದರು.
ಕೃಷಿ ಸಂಪನ್ಮೂಲ, ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ವಿಶೇಷ ಪ್ರಯತ್ನ ಮಾಡುತ್ತಿದೆ. ಜೊತೆಗೆ ಮೀನುಗಾರರನ್ನು ಒಳಗೊಂಡಂತೆ ಎಲ್ಲ ಪ್ರದೇಶದ ರೈತರ ಬೆಂಬಲಕ್ಕೆ ನಿಲ್ಲಲ್ಲಿದೆ. ರೈತರು ತಮ್ಮ ಜಮೀನುಗಳಲ್ಲಿ ಉತ್ತಮ ಫಸಲನ್ನು ಬೆಳೆಯುವ ಮೂಲಕ ಆರ್ಥಿಕವಾಗಿ ಸದೃಢರಾಗಬೇಕೆಂದು ಅವರು ಆಶಿಸಿದರು.
ವಿಜಯ ಕರ್ನಾಟಕ ಮತ್ತು ಬೆಂಗಳೂರು ಮಿರರ್ ಪತ್ರಿಕೆಗಳ ಸಿಇಒ ರಂಜಿತ್ ಕಾಟೆ ಮಾತನಾಡಿ, ವೈದ್ಯರು, ಇಂಜಿನಿಯರ್, ಲಾಯರ್ ಮೊದಲಾದ ವೃತ್ತಿಗಳು ಗುರುತಿಸಲ್ಪಡುತ್ತವೆ ಹಾಗೂ ಗೌರವಿಸಲ್ಪಡುತ್ತವೆ. ಆದರೆ, ಶ್ರಮಜೀವಿಗಳಾದ ರೈತರನ್ನು ಗುರುತಿಸುವಂತಹ ಕೆಲಸವಾಗಬೇಕಿದೆ. ಆ ನಿಟ್ಟಿನಲ್ಲಿ 20ಮಂದಿ ಮಾದರಿ ರೈತರನ್ನು ಗುರುತಿಸಿ, ಗೌರವಿಸಲಾಗುತ್ತಿದೆ ಎಂದರು.
ಈ ವೇಳೆ ಕೃಷಿ ವಿವಿ ಕುಲಪತಿ ಡಾ. ರಾಜೇಂದ್ರ ಪ್ರಸಾದ್, ಕೃಷಿ ಇಲಾಖೆ ನಿರ್ದೇಶಕರಾದ ಬಿ.ವೈ.ಶ್ರೀನಿವಾಸ್, ಹಿರಿಯ ಪತ್ರಕರ್ತ ಹರಿಪ್ರಕಾಶ್ ಕೋಣೆಮನೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.