ಸುರತ್ಕಲ್ : ಸಿಎಎ ವಿರುದ್ಧ ಪ್ರತಿಭಟನೆ
ಮಂಗಳೂರು, ಜ. 28: ಕೇಂದ್ರ ಸರಕಾರದ ಅಸಂವಿಧಾನಿಕ ಪೌರತ್ವ ಕಾಯ್ದೆಯನ್ನು ‘ನಮ್ಮ ಭಾರತ -ನಮ್ಮ ಹಕ್ಕು’ ಎನ್ನುವ ಆತ್ಮ ವಿಶ್ವಾಸದ ಮೇರುಧ್ವನಿಯೊಂದಿಗೆ ವಿರೋಧಿಸುವ ಪ್ರತಿಭಟನೆಯು ಇತ್ತೀಚೆಗೆ ಸುರತ್ಕಲ್ ಕಾನ ಬದ್ರಿಯಾ ಜುಮಾ ಮಸೀದಿಯ ಮುಂದೆ ನಡೆಯಿತು.
ಪ್ರತಿಭಟನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಮಸೀದಿಯ ಖತೀಬ್ ಹುಸ್ಸೈನ್ ಸಅದಿ ‘ಭಾರತ ದೇಶದ ಮೂಲ ಪ್ರಜೆಗಳಾದ ಭಾರತೀಯ ಮುಸಲ್ಮಾನರನ್ನು ದೇಶದಿಂದ ಹೊರದಬ್ಬಲು ಪ್ರಯತ್ನಪಡಲಾಗಿದೆ. ದೇಶ ಬಿಟ್ಟು ತೊಲಗಿದ ಪೋರ್ಚುಗೀಸರು, ಫ್ರೆಂಚರು,ಡಚ್ಚರು ಮತ್ತು ಆಂಗ್ಲರಿಂದಾಗದ ಕಾರ್ಯವನ್ನು ಭಾರತವನ್ನು ಮೋಸದಿಂದ ಆಳುತ್ತಿರುವ ಸಂಘೀ ಮನೋಸ್ಥಿತಿಯ ಬಿಜೆಪಿ ಸರಕಾರದಿಂದ ಸಾಧ್ಯವಾಗದು ಎಂದರು.
ದಿಕ್ಸೂಚಿ ಭಾಷಣ ಮಾಡಿದ ಮುಕ್ಕಾ ಮಸೀದಿಯ ಖತೀಬ್ ಸಿನಾನ್ ಅಜಿಲಮೊಗರು ‘ತ್ರಿವಳಿ ತಲಾಖ್, ಕಾಶ್ಮೀರದ 370ನೇ ವಿಧಿ ರದ್ದತಿ, ಬಾಬರ್ ಮಸೀದಿಯ ಅಸಮರ್ಪಕ ತೀರ್ಪನ್ನು ದೇಶದ ಐಕ್ಯತೆಗಾಗಿ ಸಂಯಮದಿಂದ ಸಹಿಸಿಕೊಂಡ ದೇಶದ ಮುಸ್ಲಿಮ್ ಸಮುದಾಯ ಈ ದೇಶದ ಪೌರತ್ವದ ಬಗ್ಗೆ ಕಾನೂನು ತಿದ್ದುಪಡಿ ತಂದು ಮುಸ್ಲಿಮ್ ಸಮುದಾಯವನ್ನು ತ್ರಿಶಂಕು ಸ್ಥಿತಿಗೆ ತಂದೊಡ್ಡುವ ಕೇಂದ್ರ ಸರಕಾರದ ಕೇಸರಿ ಷಡ್ಯಂತ್ರವನ್ನು ತೀವ್ರವಾಗಿ ಖಂಡಿಸುತ್ತದೆ ಎಂದರು.
ಹಾಡುಗಾರ ಜೋಕಟ್ಟೆಯ ಮುಹಮ್ಮದ್ ಶರೀಫ್ ನಿರ್ಮುಂಜೆ ಸ್ವರಚಿತ ‘ದೇಶಾಭಿಮಾನದ ಕ್ರಾಂತಿಗೀತೆಯನ್ನು ಹಾಡಿ ಆಝಾದಿ ಘೋಷಣೆ ಕೂಗಿದರು. ಮಸೀದಿಯ ಅಧ್ಯಕ್ಷ ಅಶ್ರಫ್ ಬದ್ರಿಯಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮೌಲವಿ ಉಮರುಲ್ ಫಾರೂಕ್ ಝೈನಿ ಕಿರಾಅತ್ ಫಠಿಸಿದರು. ಜಮಾಅತ್ ಸದಸ್ಯ ಇಸ್ಮಾಯಿಲ್ ಕಾರ್ಯಕ್ರಮ ನಿರೂಪಿಸಿದರು.