ಉಡುಪಿ ಜಿಲ್ಲೆಯ ಹಲವೆಡೆ ಬಂದ್ ಆಚರಣೆ
ಡಿಎನ್ಎ ಆಧಾರಿತ ಎನ್ಆರ್ಸಿ ಜಾರಿಗೆ ಆಗ್ರಹಿಸಿ ಬಹುಜನ ಕ್ರಾಂತಿ ಮೋರ್ಚಾದಿಂದ ಭಾರತ್ ಬಂದ್ ಕರೆ
ಉಡುಪಿ, ಜ.29: ಡಿಎನ್ಎ ಆಧಾರಿತ ಎನ್ಆರ್ಸಿ ಜಾರಿ ಮಾಡುವಂತೆ ಆಗ್ರಹಿಸಿ ಮತ್ತು ಸಂವಿಧಾನ ವಿರೋಧಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಬಹುಜನ ಕ್ರಾಂತಿ ಮೋರ್ಚಾ ನೀಡಿರುವ ಭಾರತ್ ಬಂದ್ ಕರೆಯಂತೆ ಇಂದು ಉಡುಪಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ಕೆಲವು ಅಂಗಡಿಗಳು ವ್ಯಾಪಾರ ಸ್ಥಗಿತಗೊಳಿಸಿ ಬಂದ್ಗೆ ಬೆಂಬಲ ವ್ಯಕ್ತಪಡಿಸಿದ್ದವು.
ಬಹುಜನ ಕ್ರಾಂತಿ ಮೋರ್ಚಾ ಸಿಎಎ ವಿರುದ್ಧ ಮೂರು ಹಂತಗಳಲ್ಲಿ ರಾಷ್ಟ್ರ ವ್ಯಾಪಿ ಆಂದೋಲನವನ್ನು ಹಮ್ಮಿಕೊಂಡಿದ್ದು, ಅದರಂತೆ ಮೊದಲ ಹಂತವಾಗಿ ಜಿಲ್ಲಾ ಮಟ್ಟದ ಧರಣಿ ಸತ್ಯಾಗ್ರಹ, ಎರಡನೆ ಹಂತವಾಗಿ ಜಿಲ್ಲಾಮಟ್ಟದ ರ್ಯಾಲಿ ಪ್ರದರ್ಶನ, ಇದೀಗ ಮೂರನೆ ಹಂತದಲ್ಲಿ ಭಾರತ್ ಬಂದ್ ಆಚರಿಸುವ ಮೂಲಕ ಹೋರಾಟವನ್ನು ತೀವ್ರಗೊಳಿಸಲಾಗಿದೆ ಎಂದು ಮೋರ್ಚಾದ ಕರ್ನಾಟಕ ಸಂಯೋಜಕ ತೌಫೀಕ್ ಪಾರ್ಕರ್ ತಿಳಿಸಿದ್ದಾರೆ.
ಬಂದ್ ಕರೆಯಂತೆ ಉಡುಪಿ ನಗರದ ಸಿಟಿಬಸ್ ನಿಲ್ದಾಣ, ಉಡುಪಿ ಜಾಮಿಯ ಮಸೀದಿ ರಸ್ತೆ ಸೇರಿದಂತೆ ಹಲವು ಕಡೆಗಳಲ್ಲಿ ವ್ಯಾಪಾಸ್ಥರು ತಮ್ಮ ಅಂಗಡಿಮುಂಗ್ಗಟ್ಟುಗಳು ಬಂದ್ ಮಾಡುವ ಮೂಲಕ ಸಿಎಎಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಅದೇರೀತಿ ಗಂಗೊಳ್ಳಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಕೆಲವು ವ್ಯಾಪರಸ್ಥರು ತಮ್ಮ ವ್ಯವಹಾರಗಳನ್ನು ಸ್ಥಗಿತಗೊಳಿಸಿದ್ದಾರೆ. ಕೆಲವು ಆಟೋ, ಕಾರು ಚಾಲಕರು ಕೂಡ ರಸ್ತೆಗೆ ಇಳಿಯದೆ ಬಂದ್ನಲ್ಲಿ ಭಾಗಿಯಾದರು. ಅಲ್ಲದೆ ಶಿರೂರು ಹಾಗೂ ಕಂಡ್ಲೂರುಗಳಲ್ಲೂ ವ್ಯಾಪಾರಸ್ಥರು ತಮ್ಮ ಅಂಗಡಿಗಳನ್ನು ಮುಚ್ಚಿ ಬಂದ್ಗೆ ಬೆಂಬಲ ಸೂಚಿಸಿದ್ದಾರೆ.