ಮಂಜೇಶ್ವರ: ಬೈಕಿಗೆ ಬಸ್ ಢಿಕ್ಕಿ; ಓರ್ವ ಮೃತ್ಯು, ಇಬ್ಬರು ಗಂಭೀರ
ಮಂಜೇಶ್ವರ, ಜ.29: ಸರಕಾರಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು, ಪಾದಚಾರಿಯೊಬ್ಬರ ಸಹಿತ ಇಬ್ಬರು ಗಂಭೀರ ಗಾಯಗೊಂಡ ಘಟನೆ ಬುಧವಾರ ಬೆಳಗ್ಗೆ ಮಂಜೇಶ್ವರದಲ್ಲಿ ನಡೆದಿದೆ.
ಮೃತರನ್ನು ಬೈಕ್ ಸವಾರ ಕುಂಜತ್ತೂರು ಮಹಾಲಿಂಗೇಶ್ವರ ನಿವಾಸಿ ಲೊಕೇಶ್ (45) ಎಂದು ಗುರುತಿಸಲಾಗಿದೆ. ಬೈಕ್ ಸಹಸವಾರೆಯಾಗಿದ್ದ ಲೋಕೇಶ್ರ ಪತ್ನಿ ಉಪ್ಪಳ ಐಲ ನಿವಾಸಿ ಶೈಲಜಾ(41) ಹಾಗೂ ಅಪಘಾತದಲ್ಲಿ ಸಿಲುಕಿದ್ದ ಪಾದಚಾರಿ ಉದ್ಯಾವರ ಫಸ್ಟ್ ಸಿಗ್ನಲ್ ನಿವಾಸಿ ರವಿ(45) ಎಂಬವರು ಗಂಭೀರ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ 66ರ ಮಂಜೇಶ್ವರ ಸಂಧ್ಯಾ ಗ್ಯಾರೇಜ್ ಪರಿಸರದಲ್ಲಿ ಬುಧವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ರಸ್ತೆ ದಾಟುತ್ತಿದ್ದ ರವಿಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲೆತ್ನಿಸಿದಾಗ ಚಾಲಕನ ನಿಯಂತ್ರಣ ತಪ್ಪಿದ ಬಸ್ ಎದುರಿನಿಂದ ಬರುತ್ತಿದ್ದ ಲೋಕೇಶ್ ದಂಪತಿಯಿದ್ದ ಬೈಕಿಗೆ ಢಿಕ್ಕಿ ಹೊಡೆಯಿತೆನ್ನಲಾಗಿದೆ. ಇದರಿಂದ ಮೂವರು ಗಾಯಗೊಂಡಿದ್ದು, ತೀವ್ರ ಸ್ವರೂಪದ ಗಾಯಗಳಾಗಿದ್ದ ಲೋಕೇಶ್ ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಕೊನೆಯುಸಿರೆಳೆದಿದ್ದಾರೆ.
ಸ್ಥಳಕ್ಕಾಗಮಿಸಿದ ಮಂಜೇಶ್ವರ ಪೊಲೀಸರು ಬಸ್ಸನ್ನು ವಶಕ್ಕೆ ಪಡೆದಿದ್ದಾರೆ.