ಬೆಂಗಳೂರು: ಫೆ.15ರಂದು ಪೌರತ್ವ ಕಾಯ್ದೆಯ ಪರಿಣಾಮಗಳ ಕುರಿತು ಸಾರ್ವಜನಿಕ ಸಭೆ
ಬೆಂಗಳೂರು, ಫೆ.13: ನಾಗರಿಕ ಅಥವಾ ಪೌರತ್ವ (ತಿದ್ದುಪಡಿ) ಕಾಯ್ದೆಯಿಂದ ದುಡಿಯುವ ವರ್ಗದ ಮೇಲಾಗುವ ಪರಿಣಾಮಗಳ ಕುರಿತು, ನಾವು ಭಾರತೀಯರು ತಂಡವು ಫೆ.15ರಂದು ಮಧ್ಯಾಹ್ನ 2ಕ್ಕೆ ಸಾರ್ವಜನಿಕ ಸಭೆಯನ್ನು ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಹಮ್ಮಿಕೊಂಡಿದೆ.
ಗುರುವಾರ ಪ್ರೆಸ್ಕ್ಲಬ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾವು ಭಾರತೀಯರು ತಂಡದ ಗೌರಿ, ಸಾರ್ವಜನಿಕ ಸಭೆಯ ಮುಖ್ಯ ಅತಿಥಿಗಳಾಗಿ ದಲಿತ ನಾಯಕ, ವಡ್ಗಾಂವ್ ಕ್ಷೇತ್ರದ ಶಾಸಕ ಜಿಗ್ನೇಶ್ ಮೇವಾನಿ, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಭಾರತದಲ್ಲಿ ಎನ್ಆರ್ಸಿ ಮತ್ತು ಎನ್ಆರ್ಪಿ ಕಾಯ್ದೆಯನ್ನು ಜಾರಿಗೊಳಿಸಿದರೆ ಅನೇಕ ಕೆಳವರ್ಗದ ಜನರು ಅಧಿಕೃತ ದಾಖಲೆಗಳು ತೋರಿಸಲಾಗದೆ ಪೌರತ್ವದಿಂದ ಹೊರಗುಳಿಯಬೇಕಾಗುತ್ತದೆ. ಈ ನಿಟ್ಟಿನಲ್ಲಿ ಪೌರತ್ವ ಕಾಯ್ದೆಯ ಬಗ್ಗೆ ಸಾರ್ವಜನಿಕರಿಗೆ ಮನವರಿಕೆ ಮಾಡುವ ದೃಷ್ಟಿಯಿಂದ ಈ ಸಾರ್ವಜನಿಕ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪೌರತ್ವ ಕಾಯ್ದೆ ಪಡೆಯಲು ದಾಖಲೆ ಮುಖ್ಯ. ಆದರೆ, ಸ್ಲಂ ವಾಸಿಗಳು, ಬೀದಿ ಬದಿ ವಾಸಿಸುವವರು, ಲೈಂಗಿಕ ಅಲ್ಪಸಂಖ್ಯಾತರು, ದಲಿತರ ಬಳಿ ದಾಖಲೆಗಳೇ ಇಲ್ಲ. ಅವರಿಗೆ ಮನೆಗಳೇ ಇಲ್ಲದಾಗ ದಾಖಲಾತಿಯನ್ನು ಎಲ್ಲಿಂದ ತೋರಿಸಲು ಸಾಧ್ಯ. ಇದರಿಂದ ಅವರಿಗೆ ತುಂಬಾ ತೊಂದರೆಯಾಗುತ್ತದೆ ಎಂದು ತಿಳಿಸಿದರು.
ಹಾಗಾಗಿ ಈ ಕಾಯ್ದೆಯಿಂದ ದಲಿತ, ಆದಿವಾಸಿ, ಬುಡಕಟ್ಟು ಜನಾಂಗ, ಲೈಂಗಿಕ ಅಲ್ಪಸಂಖ್ಯಾತರು ಹಾಗೂ ವಿಕಚೇತನರಿಗೆ ಏನೆಲ್ಲಾ ಸಮಸ್ಯೆಗಳು ಎದುರಾಗುತ್ತವೆ ಎಂದು ಈ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು.