ಎನ್ಆರ್ ಸಿ ಕುರಿತ ಇಮೇಲ್, ದತ್ತಾಂಶ ಉದ್ದೇಶಪೂರ್ವಕವಾಗಿ ನಾಶಪಡಿಸಲಾಗಿದೆ: ಅಸ್ಸಾಂ ಅಧಿಕಾರಿಗಳ ಆರೋಪ
ಗುವಾಹಟಿ: ಅಸ್ಸಾಂನ ಎನ್ಆರ್ ಸಿ ಕುರಿತಾದ ಕೆಲವೊಂದು ದತ್ತಾಂಶಗಳು ಹಾಗೂ ಇಮೇಲ್ ಗಳನ್ನು ಉದ್ದೇಶಪೂರ್ವಕ ನಾಶಪಡಿಸಲಾಗಿದೆಯೆನ್ನಲಾದ ಪ್ರಕರಣಗಳ ಕುರಿತಂತೆ ಸ್ವತಂತ್ರ ತನಿಖೆ ನಡೆಸುವಂತೆ ರಾಜ್ಯದ ಎನ್ಆರ್ ಸಿ ಅಧಿಕಾರಿಗಳು ಕೇಂದ್ರವನ್ನು ಆಗ್ರಹಿಸುವ ಸಾಧ್ಯತೆಯಿದೆ ಎಂದು ndtv.com ವರದಿ ಮಾಡಿದೆ.
ರಾಜ್ಯ ಎನ್ಆರ್ ಸಿ ಸಮನ್ವಯಕಾರ ಪ್ರತೀಕ್ ಹಜೇಲಾ ಅವರನ್ನು ವರ್ಗಾಯಿಸಿ ಅವರ ಸ್ಥಾನಕ್ಕೆ ಹಿತೇಶ್ ದೇವ್ ಶರ್ಮ ಅವರ ನೇಮಕಾತಿಯನ್ನು ಕಳೆದ ವರ್ಷದ ನವೆಂಬರ್-ಡಿಸೆಂಬರ್ ತಿಂಗಳಲ್ಲಿ ಮಾಡಿದ ಸಂದರ್ಭ ಈ ದತ್ತಾಂಶಗಳನ್ನು ಡಿಲೀಟ್ ಮಾಡಲಾಗಿವೆ ಎಂದು ಶಂಕಿಸಲಾಗಿದೆ.
ಅಸ್ಸಾಂನ ಎನ್ಆರ್ ಸಿ ಪ್ರಕ್ರಿಯೆ ಸುಪ್ರೀಂ ಕೋರ್ಟ್ ಉಸ್ತುವಾರಿಯಲ್ಲಿ ನಡೆಯುತ್ತಿದ್ದುದರಿಂದ ಈ ದತ್ತಾಂಶ ಡಿಲೀಟ್ ಪ್ರಕರಣದ ಕುರಿತಂತೆ ಅಸ್ಸಾಂ ಎನ್ಆರ್ ಸಿ ನಿರ್ದೇಶನಾಲಯ ಸುಪ್ರೀಂ ಕೋರ್ಟಿಗೆ ಅಪೀಲು ಸಲ್ಲಿಸಬೇಕಾಗಬಹುದು ಎಂದು ಮೂಲಗಳು ತಿಳಿಸಿವೆ. ಭಾರತದ ರಿಜಿಸ್ಟ್ರಾರ್ ಜನರಲ್ ಮೂಲಕ ತನಿಖೆಗೆ ಮನವಿ ಸಲ್ಲಿಸುವ ಸಾಧ್ಯತೆಯಿದೆ,.
ಅಸ್ಸಾಂ ಎನ್ಆರ್ ಸಿ ಅಧಿಕಾರಿಗಳ ಶಂಕೆಯಂತೆ ಪೌರತ್ವ ಪಟ್ಟಿಯನ್ನು ಅಪ್ಡೇಟ್ ಮಾಡುವ ಜವಾಬ್ದಾರಿ ಹೊತ್ತಿರುವ ಹಿರಿಯ ಅಧಿಕಾರಿಯೊಬ್ಬರ ಮೇಲೆ ಶಂಕೆಯಿದೆ ಎನ್ನಲಾಗುತ್ತಿದ್ದು, ಹಜೇಲಾ ಅವರು ರಾಜೀನಾಮೆ ನೀಡಿದ ಬೆನ್ನಲ್ಲೇ ಈ ಅಧಿಕಾರಿ ರಾಜೀನಾಮೆ ನೀಡಿದ್ದರಲ್ಲದೆ ಅಧಿಕೃತ ಇಮೇಲ್ ಖಾತೆಗಳ ಪಾಸ್ವರ್ಡ್ಗಳನ್ನೂ ಇತರ ಅಧಿಕಾರಿಗಳಿಗೆ ನೀಡಿಲ್ಲವೆನ್ನಲಾಗಿದೆ. ಬುಧವಾರ ಎನ್ಆರ್ ಸಿ ಅಧಿಕಾರಿಗಳು ಎನ್ಆರ್ ಸಿಯ ಮಾಜಿ ಪ್ರಾಜೆಕ್ಟ್ ಮ್ಯಾನೇಜರ್ ಅಜುಪಿ ಬರುವಾ ಅವರ ವಿರುದ್ಧ ಈ ನಿಟ್ಟಿನಲ್ಲಿ ದೂರು ದಾಖಲಿಸಿದ್ದಾರೆ.
ಅಸ್ಸಾಂನ ಎನ್ಆರ್ ಸಿ ಅಂತಿಮ ಡಾಟಾ ಅಧಿಕೃತ ವೆಬ್ ಸೈಟ್ ನಿಂದ ನಾಪತ್ತೆಯಾಗಿದೆ ಎಂಬ ಮಾಧ್ಯಮ ವರದಿಗಳ ನಂತರ ಈ ಪೊಲೀಸ್ ದೂರು ದಾಖಲಾಗಿದೆ.