ಶಶಿಕಾಂತ ಶಿವತ್ತಾಯ
ಉಡುಪಿ, ಫೆ.15: ಉಡುಪಿಯ ಬಿಜೆಪಿಯ ಯುವ ಮುಖಂಡ ಶೀಂಬ್ರ ಶಶಿಕಾಂತ ಶಿವತ್ತಾಯ ಅಲ್ಪಕಾಲದ ಅಸೌಖ್ಯದಿಂದ ಇಂದು ಮುಂಜಾನೆ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 39 ವರ್ಷ ಪ್ರಾಯವಾಗಿತ್ತು.
ನಿವೃತ್ತ ಮುಖ್ಯೋಪಾದ್ಯಾಯರಾದ ನರಸಿಂಹ ಶಿವತ್ತಾಯರ ಪುತ್ರರಾಗಿರುವ ಶಶಿಕಾಂತ ಅವಿವಾಹಿತರಾಗಿದ್ದು, ತಾಯಿ, ಮೂವರು ಸಹೋದರರು ಹಾಗೂ ಐವರು ಸಹೋದರಿಯರನ್ನು ಅಗಲಿದ್ದಾರೆ. ಪೆರಂಪಳ್ಳಿ ಯುವಕ ಮಂಡಲ ಹಾಗೂ ನವಚೈತನ್ಯ ಯುವಕ ಮಂಡಲ ಶೀಂಬ್ರದ ಅಧ್ಯಕ್ಷರಾಗಿ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಪೆರಂಪಳ್ಳಿ ಬಿಜೆಪಿ ಸ್ಥಾನೀಯ ಸಮಿತಿಯ ಪ್ರಮುಖರಾಗಿದ್ದರಲ್ಲದೇ, ಕರಂಬಳ್ಳಿ ವಲಯ ಬಾ್ರಹ್ಮಣ ಸಮಿತಿಯ ಸದಸ್ಯರಾಗಿದ್ದರು.
ಉತ್ತಮ ಕ್ರೀಡಾಪಟುವಾಗಿದ್ದ ಶಶಿಕಾಂತ್, ಪೆರಂಪಳ್ಳಿಯಲ್ಲಿ ಕ್ರಿಕೆಟ್, ಬ್ಯಾಡ್ಮಿಂಟನ್ ಹಾಗೂ ವಾಲಿಬಾಲ್ ಪಂದ್ಯಾಟಗಳನ್ನು ಆಯೋಜಿಸುವಲ್ಲಿ ಮುಂಚೂಣಿಯಲ್ಲಿದ್ದರು. ಶಶಿಕಾಂತ್ ನಿಧನಕ್ಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಕೆ.ರಘುಪತಿ ಭಟ್, ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್ ಕುಯಿಲಾಡಿ, ಮಾಜಿ ಶಾಸಕ ಪ್ರಮೋದ್ ಮದ್ವರಾಜ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.