'ಸಮಸ್ಯೆಯನ್ನು ಒಟ್ಟಾಗಿ ಪರಿಹರಿಸೋಣ': ಶಾಹೀನ್ ಬಾಗ್ ನಲ್ಲಿ ಸುಪ್ರೀಂ ಕೋರ್ಟ್ ಸಂಧಾನಕಾರರು
ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸಿ ಶಾಹೀನ್ ಬಾಗ್ ನಲ್ಲಿ ಕಳೆದೆರಡು ತಿಂಗಳಿಗೂ ಹೆಚ್ಚು ಸಮಯದಿಂದ ಪ್ರತಿಭಟನೆ ನಡೆಸುತ್ತಿರುವ ಮಹಿಳೆಯರ ಜತೆ ಮಾತನಾಡಲು ಸುಪ್ರೀಂ ಕೋರ್ಟ್ ನೇಮಿತ ಸಂಧಾನಕಾರರಾದ ಸಂಜಯ್ ಹೆಗ್ಡೆ ಹಾಗೂ ಸಾಧನಾ ರಾಮಚಂದ್ರನ್ ಈಗ ಶಾಹೀನ್ ಬಾಗ್ ನಲ್ಲಿದ್ದಾರೆ.
ಶಾಹೀನ್ ಬಾಗ್ ತೆರವುಗೊಳಿಸಿ ಬೇರೆ ಸ್ಥಳದಲ್ಲಿ ಪ್ರತಿಭಟನೆ ಮುಂದುವರಿಸುವಂತೆ ಅವರ ಮನವೊಲಿಸಲು ಸುಪ್ರೀಂ ಕೋರ್ಟ್ ಸಂಧಾನಕಾರರಿಗೆ ಸೂಚಿಸಿದೆ.
"ನಿಮ್ಮ ಪ್ರತಿಭಟಿಸುವ ಹಕ್ಕನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಸಮಸ್ಯೆಯನ್ನು ಒಟ್ಟಾಗಿ ಪರಿಹರಿಸೋಣ. ನಾವು ಎಲ್ಲರ ಮಾತುಗಳನ್ನೂ ಆಲಿಸುತ್ತೇವೆ, ನಾವು ಒಂದು ಪರಿಹಾರವನ್ನು ಕಂಡು ಹಿಡಿಯುತ್ತೇವೆ ಹಾಗೂ ಅದು ಜಗತ್ತಿಗೇ ಒಂದು ಉತ್ತಮ ಉದಾಹರಣೆಯಾಗಲಿದೆ'' ಎಂದು ಸಾಧನಾ ರಾಮಚಂದ್ರನ್ ಪ್ರತಿಭಟನಾಕಾರರನ್ನು ಉದ್ದೇಶಿಸಿ ಹೇಳಿದರು.
ಮಾಧ್ಯಮಗಳನ್ನು ದೂರವಿರಿಸಿ ಮಾತುಕತೆಗೆ ಬರುವಂತೆ ಸಂಧಾನಕಾರರು ಪ್ರತಿಭಟನಾಕಾರರಿಗೆ ಹೇಳಿದರೂ ಮಾಧ್ಯಮ ಮಂದಿಯ ಉಪಸ್ಥಿತಿಯಲ್ಲಿಯೇ ಮಾತುಕತೆಗಳು ನಡೆಯಬೇಕೆಂದು ಪ್ರತಿಭಟನಾಕಾರರು ಹೇಳಿದ್ದಾರೆ.
"ಪ್ರತಿಭಟಿಸುವ ಹಕ್ಕು ಒಂದು ಮೂಲಭೂತ ಹಕ್ಕು, ಆದರೆ ಎಲ್ಲೆಗಳು ಹಾಗೂ ಸೀಮೆಗಳಿವೆ. ಎಲ್ಲರೂ ರಸ್ತೆ ತಡೆ ನಡೆಸಿದರೆ ಜನರೆಲ್ಲಿ ಹೋಗುವುದು?'' ಎಂದು ಸುಪ್ರೀಂ ಕೋರ್ಟ್ ವಿಚಾರಣೆ ವೇಳೆ ಪ್ರಶ್ನಿಸಿತ್ತು.