ಟಿಪ್ಪು, ಪ್ರಗತಿಪರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ವಿವಿಧ ಸಂಘಟನೆಗಳಿಂದ ಮೈಸೂರಿನಲ್ಲಿ ಧರಣಿ
ಮೈಸೂರು,ಫೆ.19: ಟಿಪ್ಪು ಮತ್ತು ಪ್ರಗತಿಪರರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿ ಸಂವಿಧಾನ ಹೋರಾಟ ಸಮಿತಿ, ದಸಂಸ ಸೇರಿದಂತೆ ಪ್ರಗತಿಪರ ಸಂಘಟನೆಗಳ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಕಲಾಮಂದಿರದ ರಂಗಾಯಣದ ಆವರಣದಲ್ಲಿ ಬಹುರೂಪಿ ನಾಟಕೋತ್ಸವದ ಅಂತಿಮ ದಿನವಾದ ಬುಧವಾರ ಸಮಾವೇಶಗೊಂಡ ಪ್ರತಿಭಟನಾಕಾರರು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರೆಗೋಡು ಮಾತನಾಡಿ, ರಂಗಾಯಣದ ನಿರ್ದೇಶಕ ಸ್ಥಾನ ಅಲಂಕರಿಸುವ ಯೋಗ್ಯತೆ ಅಡ್ಡಂಡ ಸಿ.ಕಾರ್ಯಪ್ಪ ಅವರಿಗಿಲ್ಲ. ಆತನೊಬ್ಬ ಅಸಭ್ಯ ಮತ್ತು ಅನೈತಿಕ ವ್ಯಕ್ತಿ, ಆತ ಮಹಿಳೆಯರ ಬಗ್ಗೆ ಕೀಳು ಮನೋಭಾವ ಹೊಂದಿರುವಾತ, ಆತನನ್ನು ಕೊಡಗಿನ ಜನ ಒದ್ದು ಓಡಿಸಿದ್ದಾರೆ. ಇಂತಹ ವ್ಯಕ್ತಿ ಬಿಜೆಪಿ ನಾಯಕರ ಕಾಲು ಹಿಡಿದು ಈ ಸ್ಥಾನಕ್ಕೆ ಬಂದು ಕುಳಿತಿದ್ದಾನೆ ಎಂದು ವಾಗ್ದಾಳಿ ನಡೆಸಿದರು. ಟಿಪ್ಪು ಬಗ್ಗೆ ಕೇವಲವಾಗಿ ಮಾತನಾಡಿದ್ದನ್ನು ಖಂಡಿಸಿದ ರಂಗಾಯಣದ ಮಾಜಿ ನಿರ್ದೇಶಕ ಜನಾರ್ಧನ್ (ಜನ್ನಿ) ಅವರ ವಿರುದ್ಧ ಅವನೊಬ್ಬ ಕುಡುಕ ಎಂಬ ಪದವನ್ನು ಬಳಸಿದ್ದಾರೆ. ಜೊತೆಗೆ ಪ್ರಗತಿಪರರ ವಿರುದ್ಧವೂ ಕೇವಲವಾಗಿ ಮಾತನಾಡಿದ್ದಾರೆ. ಹಾಗಾಗಿ ಈತನನ್ನು ಕೂಡಲೇ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ದಸಂಸ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್ ಮಾನಾಡಿ, ಇವನ್ನೊಬ್ಬ ಮಹಿಳಾ ವಿರೋಧಿ ಮನೋಭಾವ ಹೊಂದಿರುವ ವ್ಯಕ್ತಿ, ಈತನ ಬಗ್ಗೆ ಒಳ್ಳೆಯ ಅಭಿಪ್ರಾಯ ಇಲ್ಲ, ಮೈಸೂರಿನಂತ ಪ್ರತಿಷ್ಠಿತ ರಂಗಾಯಣಕ್ಕೆ ಈತನನ್ನು ನಿರ್ದೇಶಕನನ್ನಾಗಿ ಮಾಡಿರುವುದೇ ದೊಡ್ಡ ತಪ್ಪು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಪ್ರಗತಿಪರ ಚಿಂತಕರಾದ ಡಾ.ಎಲ್.ಲಕ್ಷ್ಮಿನಾರಾಯಣ್, ಸಾಹಿತಿ ರತಿರಾವ್, ಪತ್ರಕರ್ತರಾದ ಟಿ.ಗುರುರಾಜ್, ಕೆ.ದೀಪಕ್, ಕರ್ನಾಟಕ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಶಿವರಾಂ, ಡಾ.ಕೃಷ್ಣಮೂರ್ತಿ ಚಮರಂ, ದಸಂಸ ಮೈಸೂರು ತಾಲ್ಲೂಕು ಅಧ್ಯಕ್ಷ ಕಲ್ಲಹಳ್ಳಿ ಕುಮಾರ್, ಗೋಪಾಲ್ ಕೃಷ್ಣ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಬಹು ಸಂಸ್ಕೃತಿ ಹೊಂದಿಲ್ಲದ ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಅವರನ್ನು ಕೂಡಲೇ ವಜಾಗೊಳಿಸುವ ಮೂಲಕ ರಂಗಾಯಣದ ಘನೆಯನ್ನು ಕಾಪಾಡಬೇಕಿದೆ.
-ಕಲ್ಲಹಳ್ಳಿ ಕುಮಾರ್, ದಸಂಸ ತಾಲೂಕು ಅಧ್ಯಕ್ಷ, ಮೈಸೂರು.
ಮೈಸೂರಿನಲ್ಲಿ ಗೋಡ್ಸೆಗಳ ಆಟ ನಡೆಯುವುದಿಲ್ಲ
ಮೈಸೂರಿನಲ್ಲಿ ಗೋಡ್ಸೆಗಳ ಆಟ ನಡೆಯುವುದಿಲ್ಲ. ತಮ್ಮ ಸಾಂಸ್ಕೃತಿಕ ಪ್ರಭುಗಳನ್ನು ಮೆಚ್ಚಿಸಲು ಹಿಂದಿನ ನಿರ್ದೇಶಕರೊಬ್ಬರನ್ನು ಅನಾವಶ್ಯಕವಾಗಿ ತನ್ನ ಆತ್ಮೀಯ ಸ್ನೇಹಿತ, ಆದರೆ ಕುಡುಕ ಎಂದು ನಿಂದಿಸುವಷ್ಟು ಕೆಳಮಟ್ಟಕ್ಕಿಳಿದಿರುವುದು ಇವರ ಕುಲದ ನೆಲೆಯನ್ನು ತಿಳಿಸುತ್ತದೆ. ಕಾರ್ಯಪ್ಪನವರ ಮುಖದಲ್ಲಿ ಅಪ್ಪಟ ಕುಡುಕನ ಕಳೆ ಎದ್ದು ಕಾಣುತ್ತದೆಯೇ ಹೊರತು ಸಾಂಸ್ಕೃತಿಕ ಶ್ರೀಮಂತಿಕೆ ಕಳೆ ಎಳ್ಳಷ್ಟು ಗೋಚರಿಸುವುದಿಲ್ಲಪ್ರೊ.ಮಹೇಶ್ ಚಂದ್ರಗುರು