ದ.ಕ. ಜಿಲ್ಲಾ ಅಂಬೇಡ್ಕರ್ ಭವನ ಉದ್ಘಾಟನೆ ಭಾಗ್ಯ ಯಾವಾಗ ?
ಜಿಲ್ಲಾ ಮಟ್ಟದ ದಲಿತರ ಕುಂದುಕೊರತೆ ಸಭೆಯಲ್ಲಿ ಮುಖಂಡರುಗಳ ಪ್ರಶ್ನೆ
ಮಂಗಳೂರು, ಫೆ. 24: ಹೋರಾಟ, ಪ್ರತಿಭಟನೆಗಳ ಫಲವಾಗಿ ಕೊನೆಗೂ ಜಿಲ್ಲಾ ಮಟ್ಟದ ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣ ವಾಗಿದ್ದರೂ, ಉದ್ಘಾಟನೆಗೆ ವಿಳಂಬ ಮಾಡಲಾಗುತ್ತಿದೆ ಎಂಬ ಆರೋಪ ದಲಿತ ನಾಯಕರಿಂದ ಇಂದು ವ್ಯಕ್ತವಾಯಿತು.
ದ.ಕ. ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದ ದಲಿತರ ಕುಂದು ಕೊರತೆಗಳ ದಲಿತ ನಾಯಕರು ಅಂಬೇಡ್ಕರ್ ಭವನ ಉದ್ಘಾಟನೆಯ ಕುರಿಂತೆ ಪ್ರಶ್ನಿಸಿದರು.
ಹಿರಿಯ ದಲಿತ ನಾಯಕ ದೇವದಾಸ್ ಮಾತನಾಡಿ, 2017ರಲ್ಲಿ ಅಂಬೇಡ್ಕರ್ ಭವನಕ್ಕೆ ಶಂಕುಸ್ಥಾಪನೆ ನಡೆಸಲಾಗಿತ್ತು. ಆ ಸಂದರ್ಭ ಸಚಿವರು ಒಂದು ವರ್ಷದಲ್ಲಿ ಕಾಮಗಾರಿ ಮುಗಿಸಿ ಉದ್ಘಾಟನೆಯ ಭರವಸೆ ನೀಡಿದ್ದರು. ಇದೀಗ ಭವನ ಸಿದ್ಧವಾಗಿದ್ದರೂ ಉದ್ಘಾಟನೆ ಭಾಗ್ಯ ಯಾವಾಗ ಎಂದು ಪ್ರಶ್ನಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಯೋಗೀಶ್ ಮಾತನಾಡಿ, ಕೆಎಚ್ಬಿಗೆ 3 ಕೋಟಿ ರೂ. ಹಣ ಪಾವತಿಯಾಗಬೇಕಿರುವ ಹಿನ್ನೆಲೆಯಲ್ಲಿ ವಿಳಂಬವಾಗಿದೆ ಎಂದರು. ಎಪ್ರಿಲ್ನಲ್ಲಿ ಅಂಬೇಡ್ಕರ್ ಜಯಂತಿಗೆ ಮೊದಲು ಅಂಬೇಡ್ಕರ್ ಭವನ ಉದ್ಘಾಟನೆಯಾಗಲಿ ಎಂದು ನಾಯಕರು ಜಿಲ್ಲಾಧಿಕಾರಿಯನ್ನು ಆಗ್ರಹಿಸಿದರು.
ಧಾರ್ಮಿಕ ಕಾರ್ಯಕ್ರಮಕ್ಕೆ ಅವಕಾಶ ನೀಡದಿರಲು ಒತ್ತಾಯ
ದಲಿತ ನಾಯಕ ರಮೇಶ್ ಕೋಟ್ಯಾನ್ ಮಾತನಾಡಿ, ಅಂಬೇಡ್ಕರ್ ಭವನ ಆಗಿದೆ. ಆದರೆ ಅದರ ಕಾರು ಪಾರ್ಕಿಂಗ್ ಜಾಗದಲ್ಲಿ ನೇಮೋತ್ಸವ ನಡೆಸಲು ಮಂಗಳೂರು ಮಹಾನಗರ ಪಾಲಿಕೆ ಮೂಲಕ ಒತ್ತಡ ತರುವ ಪ್ರಯತ್ನ ನಡೆಯುತ್ತಿದೆ. ಇದಕ್ಕೆ ಅವಕಾಶ ನೀಡಬಾರದು. ಭವನಕ್ಕೆ ತೊಂದರೆ ಮಾಡುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು. ಈ ಬಗ್ಗೆ ದಿಟ್ಟ ಕ್ರಮವನ್ನು ಜಿಲ್ಲಾಧಿಕಾರಿ ವಹಿಸಬೇಕೆಂದು ದಲಿತ ನಾಯಕರು ಒತ್ತಾಯಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್, ಮನಪಾ ಜಂಟಿ ಆಯುಕ್ತ ಡಾ. ಸಂತೋಷ್ ಕುಮಾರ್, ಸಹಾಯಕ ಆಯುಕ್ತರು ಉಪಸ್ಥಿತರಿದ್ದರು.
ಬೋರ್ವೆಲ್ಗೆ ಸಿಗದ ಎನ್ಒಸಿ: ಸಭೆಯಲ್ಲಿ ದಂಪತಿಯಿಂದ ಆತ್ಮಹತ್ಯೆಯ ಪ್ರಸ್ತಾಪ!
ಬಂಟ್ವಾಳದ ಪಂಜಿಕಲ್ಲು ಗ್ರಾ.ಪಂ. ವ್ಯಾಪ್ತಿಯ ತಮ್ಮ 2.19 ಎಕರೆ ಜಾಗದಲ್ಲಿ ಬ್ಯಾಂಕ್ನಿಂದ ಸುಮಾರು 8 ಲಕ್ಷ ರೂ. ಸಾಲ ಮಾಡಿ 800 ಅಡಿಕೆ ಗಿಡಗಳನ್ನು ನೆಡಲಾಗಿದೆ. ಆದರೆ ಬೋರ್ವೆಲ್ ತೋಡಿಸಲು ಗ್ರಾಪಂನಿಂದ ನಿರಾಪೇಕ್ಷಣ ಪತ್ರ ಸಿಗದ ಕಾರಣ ನೀರಿಲ್ಲದೆ ಮರಗಳು ಒಣಗಿವೆ. ಈ ಬಗ್ಗೆ ಸ್ಥಳೀಯ ಶಾಸಕರು, ಸಚಿವರು ಅವಕಾಶ ನೀಡುವಂತೆ ತಿಳಿಸಿದ್ದರೂ, ತಾಲೂಕು ಇಒ ಹಾಗೂ ಪಂಚಾಯತ್ ಪಿಡಿಒ ಅಡ್ಡಿ ಪಡಿಸುತ್ತಿದ್ದಾರೆ. ಇದರಿಂದ ಬ್ಯಾಂಕ್ ಸಾಲ ಪಾವತಿಸುವ ಆತಂಕ ಎದುರಾಗಿದೆ. ಹೀಗಾದರೆ ಅಡಿಕೆ ಮರಗಳಿಗೆ ಸಿಂಪಡಿಸಲು ತಂದಿರುವ ಕೀಟನಾಶಕವನ್ನು ನಾನು ಮತ್ತು ಪತ್ನಿ ಸೇವಿಸಿ ಆತ್ಮಹತ್ಯೆಯೇ ನಮ್ಮ ಮುಂದಿನ ದಾರಿ ಎಂದು ಸಭೆಯಲ್ಲೇ ದಂಪತಿ ಅಳಲು ತೋಡಿಕೊಂಡ ಪ್ರಸಂಗ ನಡೆಯಿತು.
ಪಂಚಾಯತ್ ನೀರಿನ ಮೂಲದ ಸಮೀಪದಲ್ಲೇ ಬೋರ್ವೆಲ್ ಇರುವುದರಿಂದ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಬರುವುದರಿಂದ ಅನುಮತಿ ನೀಡಲಾಗುತ್ತಿಲ್ಲ ಎನ್ನುತ್ತಿದ್ದಾರೆ. ಸಮೀಪದಲ್ಲೇ ನಾಲ್ಕೈದು ಕೊಳವೆ ಬಾವಿಗಳಿಗೆ ಅನುಮತಿ ನೀಡಲಾಗಿದೆ. ನೀರಿನ ಸಮಸ್ಯೆ ಆದಾಗ ತಮ್ಮ ಬೋರ್ವೆಲ್ನಿಂದ ಸ್ಥಳೀಯರಿಗೆ ನೀರು ಕೊಡುವುದಾಗಿ ಮುಚ್ಚಳಿಕೆಯನ್ನೂ ಬರೆದುಕೊಟ್ಟಿದ್ದಾರೆ ಎಂದು ದಂಪತಿ ಪರವಾಗಿ ಜಗದೀಶ್ ಪಾಂಡೇಶ್ವರ ಆಗ್ರಹಿಸಿದರು.
ಈ ಸಂದರ್ಭ, ಜಿಲ್ಲಾ ಪಂಚಾಯತ್ ಸಿಇಒ ಮೂಲಕ ಪರಿಶೀಲನೆ ಮಾಡಿಸಿ, ಸಮಸ್ಯೆ ಬಗೆಹರಿಸುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದರು.
ಡಿಸಿ ಮನ್ನಾ ಭೂಮಿ: ಪ್ರತ್ಯೇಕ ಸಭೆಗೆ ನಿರ್ಧಾರ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡಿಸಿ ಮನ್ನಾ ಭೂಮಿಯನ್ನು ಹಂಚಿಕೆ ಸಂಬಂಧಿಸಿ ಇಂದು ನಡೆದ ಸಭೆಯಲ್ಲಿ ಗೊಂದಲವೇರ್ಪಟ್ಟ ಕಾರಣ, ಜಿಲ್ಲಾಧಿಕಾರಿಯವರ ಪ್ರತಿಕ್ರಿಯೆಯಿಂದ ದಲಿತ ನಾಯಕರು ಸಮಾಧಾನಗೊಳ್ಳದ ಕಾರಣ, ಈ ಬಗ್ಗೆ ಪ್ರತ್ಯೇಕ ಸಭೆ ನಡೆಸಲು ನಿರ್ಧರಿಸಲಾಯಿತು.
ಡಿಸಿ ಮನ್ನಾ ಭೂಮಿ ಹಂಚಿಕೆ ಕುರಿತಂತೆ ವಿಷಯ ಪ್ರಸ್ತಾಪಿಸಿದ ದಲಿತ ಮುಖಂಡರಾದ ರಮೇಶ್ ಕೋಟ್ಯಾನ್, 2015ರಿಂದ ಈ ಕುರಿತು 2500ಕ್ಕೂ ಅಧಿಕ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ತಾಲೂಕುವಾರು ಡಿಸಿ ಮನ್ನಾ ಭೂಮಿಯನ್ನು ಪತ್ತೆ ಮಾಡಿ ಮೀಸಲಾಗಿಟ್ಟರೂ ಈವರೆಗೂ ಭೂಮಿ ಮಾತ್ರ ಹಂಚಿಕೆಯಾಗಿಲ್ಲ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್, ಭೂಮಿ ಹಂಚಿಕೆಗೆ ಸಂಬಂಧಿಸಿ ಸರಕಾರದಿಂದ ನಿಯಮಾವಳಿ ರೂಪುಗೊಳ್ಳಬೇಕಾಗಿದೆ. ಈ ಬಗ್ಗೆ ಪ್ರಸ್ತಾವನೆ ಕೋರಿ ರಕಾರಕ್ಕೆ ಸಲ್ಲಿಸಲಾಗಿದೆ ಎಂದರು.
ಇದು ಬ್ರಿಟಿಷರ ಅವಧಿಯಲ್ಲಿಯೇ ದಲಿತರಿಗಾಗಿ ಮೀಸಲಿಟ್ಟ ಭೂಮಿ. ಯಾವುದೇ ಐದು ಎಕರೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಭೂಮಿ ಹಂಚಿಕೆ ಮಾಡುವುದಿದ್ದಲ್ಲಿ ಮಾತ್ರವೇ ಸರಕಾರದ ಅನುಮತಿ ಬೇಕಿರುವುದು. ಈಗಾಗಲೇ ಉಳಿಕೆ ಜಮೀನು ಎಂದು ಮೀಸಲಿಟ್ಟಿರುವ ಈ ಭೂಮಿ ಮುಂದೆ ಅತಿಕ್ರಮಣ ಆಗಲಿದೆ. ಜಿಲ್ಲಾಧಿಕಾರಿಯವರ ವಿವೇಚನೆ ಮೇರೆಗೆ ಕ್ರಮ ಕೈಗೊಳ್ಳುವ ಅಧಿಕಾರವಿದೆ ಎಂದು ಈ 2017ರಲ್ಲಿಯೇ ಹಿಂದಿನ ಜಿಲ್ಲಾಧಿಕಾರಿ ತಾಲೂಕುಗಳ ತಹಶೀಲ್ದಾರ್ಗೆ ಭೂಮಿ ಗುರುತಿಸುವಂತೆ ತಿಳಿಸಿ ಅದರಂತೆ ತಾಲೂಕುವಾರು ಭೂಮಿಯನ್ನು ಗುರುತಿಸಲಾಗಿದೆ ಎಂದು ದಲಿತ ಮುಖಂಡ ಜನಾರ್ದನ್ ಬೊಳಂತೂರು ಹೇಳಿದರು.
ಈ ಬಗ್ಗೆ ಕೆಲಹೊತ್ತು ಸಭೆಯಲ್ಲಿ ದಲಿತ ನಾಯಕರು ಹಾಗೂ ಅಧಿಕಾರಿಗಳ ನಡುವೆ ಚರ್ಚೆ ನಡೆಯಿತು. ಬಳಿಕ ಅಪರ ಜಿಲ್ಲಾಧಿಕಾರಿ ರೂಪಾ ಮಾತನಾಡಿ, ಸರಕಾರದ ಹಂತದಲ್ಲಿ ಡಿಸಿ ಮನ್ನಾ ಭೂಮಿಯ ಹಂಚಿಕೆ ವಿಚಾರ ಯಾವ ಹಂತದಲ್ಲಿ ಎಂದು ತಿಳಿದು ಮುಂದಿನ ವಾರ ಪ್ರತ್ಯೇಕ ಸಭೆ ನಡೆಸುವುದಾಗಿ ತಿಳಿಸಿದರು.