ಉನ್ನಾವೊ ಅತ್ಯಾಚಾರ ಪ್ರಕರಣದ ದೋಷಿ ಸೆಂಗಾರ್ ವಿಧಾನ ಸಭೆಯಿಂದ ಅನರ್ಹ
ಲಕ್ನೋ,ಫೆ.25: ಅಪ್ರಾಪ್ತ ವಯಸ್ಕ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಕ್ಕಾಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಉಚ್ಚಾಟಿತ ಬಿಜೆಪಿ ನಾಯಕ ಕುಲದೀಪ ಸಿಂಗ್ ಸೆಂಗಾರ್ ನನ್ನು ಮಂಗಳವಾರ ಉತ್ತರ ಪ್ರದೇಶ ವಿಧಾನಸಭಾ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ.
ರಾಜ್ಯದ ಬಂಗಾರ್ಮಾವು ವಿಧಾನಸಭಾ ಕ್ಷೇತ್ರವನ್ನು ನಾಲ್ಕು ಬಾರಿ ಪ್ರತಿನಿಧಿಸಿದ್ದ ಸೆಂಗಾರ್ನನ್ನು ಅತ್ಯಾಚಾರ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಕಳೆದ ವರ್ಷದ ಡಿಸೆಂಬರ್ನಲ್ಲಿ ಘೋಷಿಸಿದ್ದ ದಿಲ್ಲಿಯ ನ್ಯಾಯಾಲಯವು ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು. 2017ರ ಮಾರ್ಚ್ನಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ನಲ್ಲಿ ಆಯ್ಕೆಯಾಗಿದ್ದ ಸೆಂಗಾರ್ನನ್ನು ಆತ ತಪ್ಪಿತಸ್ಥ ಎಂದು ನ್ಯಾಯಾಲಯವು ಘೋಷಿಸಿದ ಬಳಿಕ ಪಕ್ಷದಿಂದ ಉಚ್ಚಾಟಿಸಲಾಗಿತ್ತು.
ಸೆಂಗಾರ್ ಶಿಕ್ಷೆಗೆ ಗುರಿಯಾದ 2019,ಡಿ.20ರಿಂದಲೇ ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿದೆ ಎಂದು ಪ್ರಧಾನ ಕಾರ್ಯದರ್ಶಿ (ವಿಧಾನಸಭೆ) ಪ್ರದೀಪಕುಮಾರ ದುಬೆ ಅವರು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ. ಬಂಗಾರ್ಮಾವು ಕ್ಷೇತ್ರ ಡಿ.20ರಿಂದಲೇ ತೆರವಾಗಿದೆ ಎಂದು ಈಗ ಪರಿಗಣಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ.