ಪುಂಜಾಲಕಟ್ಟೆ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ; ಮಹಿಳೆ ಮೃತ್ಯು
ಬಂಟ್ವಾಳ: ಮೆಹಂದಿ ಕಾರ್ಯಕ್ರಮ ಮುಗಿಸಿ ಮನೆಗೆ ಹಿಂದಿರುಗುವ ಮಧ್ಯರಾತ್ರಿ ವೇಳೆ ಪುಂಜಾಲಕಟ್ಟೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಹೊಂಡಕ್ಕೆ ಬಿದ್ದ ಘಟನೆಯಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದಾರೆ.
ತೆಂಕಕಜೆಕಾರು ಕಾರ್ಲ ನಿವಾಸಿ ಇಂದಿರಾ (55) ಮೃತ ಮಹಿಳೆ. ವೇಣೂರು ಕಾಶಿಪಟ್ನದಲ್ಲಿ ಇಂದಿರಾ ಅವರ ಮಗಳ ಮನೆಯಲ್ಲಿ ನಡೆಯುವ ಮದರಂಗಿ ಶಾಸ್ತ್ರ ದಲ್ಲಿ ಭಾಗಿಯಾಗಿ, ವಾಪಾಸು ಅಗುವ ವೇಳೆ ಪುಂಜಾಲಕಟ್ಟೆ ದೈಕಿನಕಟ್ಟೆ ತಿರುವಿನಲ್ಲಿ ಈ ಘಟನೆ ನಡೆದಿದೆ.
ಇಂದಿರಾ ಅವರು ಗಂಡ ನಿವೃತ್ತ ಸೈನಿಕ ಸದಾನಂದ ಅವರ ಜೊತೆ ಸ್ವಿಫ್ಟ್ ಕಾರಿನಲ್ಲಿ ಕಾಶಿಪಟ್ನದಿಂದ ಮಧ್ಯರಾತ್ರಿ ಬರುವ ವೇಳೆ ಸದಾನಂದ ಅವರು ಕಾರು ಚಲಾಯಿಸುತ್ತಿದ್ದು, ಅವರ ನಿಯಂತ್ರಣ ತಪ್ಪಿ ಕಾರು ಹೊಂಡಕ್ಕೆ ಬಿದ್ದಿದೆ. ಕಾರು ಹೊಂಡಕ್ಕೆ ಬಿದ್ದ ಶಬ್ದ ಕೇಳಿದ ಸ್ಥಳೀಯರು ಕೂಡಲೇ ಸ್ಥಳಕ್ಕೆ ಧಾವಿಸಿ ಕಾರಿನಲ್ಲಿದ್ದ ಇಬ್ಬರನ್ನು ಹೊರಕ್ಕೆ ತೆಗೆದು ಆಸ್ಪತ್ರೆಗೆ ಸಾಗಿಸಿದರಾದರೂ ಗಂಭೀರ ಸ್ವರೂಪದ ಗಾಯಗಳಾಗಿದ್ದ ಇಂದಿರಾ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ತಿಳಿದುಬಂದಿದೆ.
ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.