'ಪಾಕಿಸ್ತಾನಿ, ನಿನಗೆ ಪೌರತ್ವ ನೀಡುತ್ತೇವೆ': ಬಿಎಸ್ ಎಫ್ ಯೋಧನ ಮನೆಗೆ ಬೆಂಕಿಯಿಟ್ಟ ದುಷ್ಕರ್ಮಿಗಳು
ದಿಲ್ಲಿ ಹಿಂಸಾಚಾರ
ಹೊಸದಿಲ್ಲಿ: ಫೆಬ್ರವರಿ 25ರಂದು ದಿಲ್ಲಿಯ ಖಜೂರಿ ಖಸ್ ಪ್ರದೇಶದಲ್ಲಿ ಭುಗಿಲೆದ್ದ ಹಿಂಸಾಚಾರದ ವೇಳೆ ಬಿಎಸ್ಎಫ್ ಯೋಧ ಮುಹಮ್ಮದ್ ಅನೀಸ್ ಅವರಿಗೆ ಸೇರಿದ ಎರಡಂತಸ್ತಿನ ಮನೆಗೂ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ.
ಮನೆಯ ಹೊರಗಡೆಯಿದ್ದ ಕಾರುಗಳಿಗೆ ಮೊದಲು ಬೆಂಕಿ ಹಚ್ಚಿದ್ದ ದುಷ್ಕರ್ಮಿಗಳು ನಂತರ ಮನೆಯತ್ತ ಕಲ್ಲು ತೂರಾಟ ನಡೆಸಿದ್ದರು. "ಇದರ್ ಆ ಪಾಕಿಸ್ತಾನಿ, ತುಝೆ ನಾಗರಿಕತಾ ದೇತೇ ಹೇ'' (ಇಲ್ಲಿ ಬಾ ಪಾಕಿಸ್ತಾನಿ, ನಿನಗೆ ನಾಗರಿಕತೆ ನೀಡುತ್ತೇವೆ) ಎಂದು ಘೋಷಣೆಗಳನ್ನು ಕೂಗುತ್ತಾ ಅವರು ಮನೆಯತ್ತ ಗ್ಯಾಸ್ ಸಿಲಿಂಡರ್ ಎಸೆದು ಬೆಂಕಿ ಹಚ್ಚಿದ್ದರು.
ಆ ಸಮಯ ಮನೆಯಲ್ಲಿದ್ದ ಅನೀಸ್, ಅವರ ತಂದೆ ಮುಹಮ್ಮದ್ ಮುನೀಸ್, ಮಾವ ಅಹ್ಮದ್ ಹಾಗೂ ಸೋದರ ಸಂಬಂಧಿ ನೇಹಾ ಅಪಾಯದ ಅರಿವಾಗುತ್ತಲೇ ಹೊರಗೋಡಿದ್ದರು. ನಂತರ ಅವರನ್ನು ಅರೆಸೇನಾ ಪಡೆಗಳು ರಕ್ಷಿಸಿದ್ದವು.
ಅನೀಸ್ ಮನೆಯಿರುವ ಪ್ರದೇಶದ ಸುಮಾರು 35 ಮನೆಗಳು ದುಷ್ಕರ್ಮಿಗಳ ಅಟ್ಟಹಾಸಕ್ಕೆ ಆಹುತಿಯಾಗಿವೆ. ಅನೀಸ್ ಅವರ ವಿವಾಹ ಮುಂದಿನ ತಿಂಗಳು ಮನಡೆಯಲಿದ್ದರೆ, ನೇಹಾ ಅವರ ವಿವಾಹ ಎಪ್ರಿಲ್ನಲ್ಲಿ ನಡೆಯಲಿತ್ತು. ಅದಕ್ಕೆಂದು ಚಿನ್ನಾಭರಣಗಳನ್ನು ಮಾಡಿಸಿ ಮನೆಯಲ್ಲಿಟ್ಟದ್ದರು. ಈಗ ಎಲ್ಲವೂ ನಾಶವಾಗಿ ಕುಟುಂಬ ದಿಕ್ಕುತೋಚದಂತಾಗಿದೆ.