ಕನ್ಹಯ್ಯ ವಿರುದ್ಧ ದೇಶದ್ರೋಹ ಪ್ರಕರಣದಡಿ ಕಾನೂನು ಕ್ರಮ ಜರಗಿಸಲು ದಿಲ್ಲಿ ಸರಕಾರ ಅನುಮತಿ
ಫೈಲ್ ಚಿತ್ರ
ಹೊಸದಿಲ್ಲಿ, ಫೆ.28: ಜೆಎನ್ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ, ಎಡಪಕ್ಷ ಮುಖಂಡ ಕನ್ಹಯ್ಯ ಕುಮಾರ್ ವಿರುದ್ಧ ದೇಶದ್ರೋಹ ಪ್ರಕರಣದಡಿ ಕಾನೂನು ಕ್ರಮ ಜರಗಿಸಲು ದಿಲ್ಲಿ ಸರಕಾರ ಅನುಮತಿ ನೀಡಿದೆ.
ಪ್ರಕರಣವನ್ನು ಪರಿಶೀಲಿಸಿ, ಕಾನೂನು ತಜ್ಞರ ಸಲಹೆ ಪಡೆದ ಬಳಿಕ ಗೃಹ ಇಲಾಖೆಯ ಕಾನೂನು ಕ್ರಮ ವಿಭಾಗ ಈ ನಿರ್ಧಾರ ಕೈಗೊಂಡಿದೆ ಎಂದು ಮುಖ್ಯಮಂತ್ರಿ ಕಚೇರಿಯ ಹಿರಿಯ ಸಿಬ್ಬಂದಿಯೊಬ್ಬರು ಹೇಳಿದ್ದಾರೆ.
ಕಾನೂನು ತಂಡದ ನಿರ್ಧಾರ ಪ್ರಕ್ರಿಯೆಯಲ್ಲಿ ಮುಖ್ಯಮಂತ್ರಿ ಕಚೇರಿ ಅಥವಾ ಇತರ ಇಲಾಖೆಗಳು ಮಧ್ಯಪ್ರವೇಶಿಸುವಂತಿಲ್ಲ ಎಂದು ಮೂಲಗಳು ತಿಳಿಸಿವೆ. ದಂಡ ಪ್ರಕ್ರಿಯಾ ಸಂಹಿತೆಯ ಪ್ರಕಾರ, ದೇಶದ್ರೋಹ ಪ್ರಕರಣದಲ್ಲಿ ಆರೋಪ ಪಟ್ಟಿ ದಾಖಲಿಸಬೇಕಿದ್ದರೆ ತನಿಖಾ ಸಂಸ್ಥೆಗಳು ಸಂಬಂಧಿತ ರಾಜ್ಯ ಸರಕಾರದ ಅನುಮತಿ ಪಡೆಯಬೇಕು. 2016ರ ಫೆಬ್ರವರಿ 9ರಂದು ಜೆಎನ್ಯು ಆವರಣದಲ್ಲಿ ನಡೆದ ಪ್ರತಿಭಟನೆ ಸಂದರ್ಭ ಕನ್ಹಯ್ಯ ಕುಮಾರ್ ದೇಶವಿರೋಧಿ ಘೋಷಣೆ ಕೂಗಿದ್ದರು ಎಂದು ಆರೋಪಿಸಲಾಗಿದೆ. ಕನ್ಹಯ್ಯ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿ ಕಳೆದ ಒಂದು ವರ್ಷದಿಂದಲೂ ದಿಲ್ಲಿ ಸರಕಾರದ ಬಳಿ ಇತ್ತು. ಅರ್ಜಿಯನ್ನು ಪರಿಶೀಲಿಸಿ ಒಂದು ತಿಂಗಳ ಒಳಗೆ ನಿರ್ಧಾರ ಪ್ರಕಟಿಸಬೇಕೆಂದು ಕಳೆದ ನವೆಂಬರ್ನಲ್ಲಿ ನ್ಯಾಯಾಲಯ ದಿಲ್ಲಿ ಸರಕಾರಕ್ಕೆ ಸೂಚಿಸಿತ್ತು.