ರಾಜ್ಯ ರಾಜಧಾನಿಯಲ್ಲಿ ಕೊರೋನ ಕರಿಛಾಯೆ: ಶಿಕ್ಷಣ, ಸಾರಿಗೆ, ವ್ಯಾಪಾರ ವಹಿವಾಟಿನ ಮೇಲೆ ವ್ಯತಿರಿಕ್ತ ಪರಿಣಾಮ
►ಬಿಕೋ ಎನ್ನುತ್ತಿರುವ ಬಸ್, ಟ್ಯಾಕ್ಸಿ, ರೈಲ್ವೆ ►ಮಾರುಕಟ್ಟೆಗಳಲ್ಲಿ ಜನರೇ ಇಲ್ಲ !
ಬೆಂಗಳೂರು, ಮಾ.11: ರಾಜ್ಯದ ಜನರನ್ನು ಆತಂಕಕ್ಕೀಡು ಮಾಡಿರುವ ಕೋವಿಡ್ 19(ಕೊರೋನ) ಭೀತಿಯಿಂದ ಸಿಲಿಕಾನ್ ಸಿಟಿಯ ಜನರಲ್ಲಿ ಭೀತಿ ಹುಟ್ಟಿಸಿದ್ದು, ಬಹುತೇಕ ವಾಣಿಜ್ಯೋದ್ಯಮ, ಸಾರಿಗೆ, ವ್ಯಾಪಾರ ವಹಿವಾಟಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ನಗರದಾದ್ಯಂತ ಕೊರೋನ ಕರಿಛಾಯೆ ಆವರಿಸಿಕೊಂಡಿದೆ.
ರಾಜಧಾನಿಯಲ್ಲಿ ಬಸ್, ಆಟೋ, ಟ್ಯಾಕ್ಸಿಗಳಲ್ಲಿ ಜನರಿಲ್ಲದೇ ಬಿಕೋ ಎನ್ನುತ್ತಿದ್ದು, ರೈಲ್ವೆಗೂ ಇದರ ಬಿಸಿ ತಟ್ಟಿದೆ. ಮಾರುಕಟ್ಟೆಗಳಲ್ಲಿ ಜನರೇ ಇಲ್ಲದಂತಾಗಿದ್ದು, ತರಕಾರಿ, ಹಣ್ಣು, ಹಂಪಲು ಮಾರಾಟ ಮಾಡುವವರು ನಿರಾಶರಾಗಿ ಹಿಂದಿರುಗುತ್ತಿದ್ದಾರೆ. ಅಲ್ಲದೆ, ರಸ್ತೆ ಬದಿ ತೆರೆದಿಟ್ಟ ಆಹಾರ ಪದಾರ್ಥ ಮಾರಾಟ ನಿಷೇಧಿಸಲಾಗಿದೆ. ಇನ್ನುಳಿದಂತೆ ಸಿನಿಮಾ ಮಂದಿರಗಳ ಕಡೆ ಜನರೇ ಸುಳಿಯುತ್ತಿಲ್ಲ. ಮಾಲ್ಗಳಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರೂ, ಜನರು ಬರುತ್ತಿಲ್ಲ.
ಬೆಂಗಳೂರಿನಿಂದ ರಾಜ್ಯದ ವಿವಿಧ ಕಡೆಗಳಿಗೆ ಸಂಚರಿಸುವ ಕೆಎಸ್ಸಾರ್ಟಿಸಿ ಬಸ್ಗಳಲ್ಲಿ ಪ್ರಯಾಣಿಕರ ಸಂಖ್ಯೆ ಶೇ.20 ರಷ್ಟು ಇಳಿಕೆಯಾಗಿದೆ. ನೈಋತ್ಯ ರೈಲ್ವೆಯಲ್ಲಿ ಕಳೆದ ಒಂದು ವಾರದಿಂದ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದ್ದು, ಶೇ.3 ರಿಂದ 4 ರಷ್ಟು ಕುಸಿತ ಕಂಡಿದೆ. ಇನ್ನು, ಟ್ಯಾಕ್ಸಿ ವಾಹನಗಳಲ್ಲಿ ಶೇ.50 ರಷ್ಟು ವಾಹನ ಸ್ಥಗಿತಗೊಂಡಿದೆ. ಪ್ರವಾಸೋದ್ಯಮದ ಮೇಲೂ ಪರಿಣಾಮ ಬೀರಿದ್ದು, ಪ್ರವಾಸಿ ಟ್ಯಾಕ್ಸಿಗಳು ಕೆಲಸವಿಲ್ಲದೇ ನಷ್ಟಕ್ಕೊಳಗಾಗಿವೆ.
ಬಸ್ಗಳಲ್ಲಿ ವಿದೇಶಿಯರು ಒಳಗೊಂಡಂತೆ ಭಾರತದ ವಿವಿಧ ರಾಜ್ಯಗಳಿಂದ ಮತ್ತು ರಾಜ್ಯದ ವಿವಿಧ ಸ್ಥಳಗಳಿಂದ ಪ್ರಯಾಣಿಕರು ಸಂಚರಿಸುತ್ತಿದ್ದು, ಪ್ರಯಾಣಿಕರು ಮತ್ತು ನಿಗಮದ ಸಿಬ್ಬಂದಿಯ ಆರೋಗ್ಯದ ದೃಷ್ಟಿಯಿಂದ ಸೋಂಕು ಹರಡದಂತೆ ಕೆಲವೊಂದು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಬಸ್ ಒಳ ಮತ್ತು ಹೊರ ಭಾಗವನ್ನು ಸ್ವಚ್ಛವಾಗಿಡುವುದರ ಜತೆಗೆ ಬಸ್ಗಳ ಒಳಗೆ ಪ್ರಯಾಣಿಕರು ಬಳಸುವ ವಸ್ತುಗಳನ್ನು ಸೋಂಕು ನಿವಾರಣಾ ದ್ರಾವಣಗಳಿಂದ ಶುಚಿಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.
ಗಂಟೆಗೊಮ್ಮೆ ಮೆಟ್ರೋ ಸ್ವಚ್ಛ!: ಕೊರೋನ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಗಂಟೆಗೊಮ್ಮೆ ಮೆಟ್ರೋ ನಿಲ್ದಾಣ ಹಾಗೂ ರೈಲು ಬೋಗಿಗಳನ್ನು ಸ್ವಚ್ಛ ಮಾಡಲಾಗುತ್ತಿದೆ. ಎಸ್ಕಲೇಟರ್ ಬದಿಯ ಹ್ಯಾಂಡಲ್, ಲಿಫ್ಟ್ಗಳ ಬಟನ್, ಗ್ರಿಲ್, ಎಎಫ್ಸಿ ಗೇಟ್, ಟಿಕೆಟ್ ಕೌಂಟರ್ಗಳನ್ನು ಶುದ್ಧಗೊಳಿಸುವ ಕಾರ್ಯ ನಡೆಯುತ್ತಿದೆ. ಈ ಕೆಲಸಗಳಿಗಾಗಿ ಪ್ರತ್ಯೇಕ ಸ್ವಚ್ಛತಾ ಸಿಬ್ಬಂದಿಗಳನ್ನು ನಮ್ಮ ಮೆಟ್ರೋ ನಿಗಮ ಆಯೋಜಿಸಿದ್ದು, ಪ್ರಯಾಣಿಕರನ್ನು ತಪಾಸಣೆ ಮಾಡುವ ಸಿಬ್ಬಂದಿಗಳಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸಲು ಸೂಚಿಸಲಾಗಿದೆ.
ಅತಂತ್ರ ಸ್ಥಿತಿಯಲ್ಲಿ ಟ್ಯಾಕ್ಸಿ ಚಾಲಕರು: ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡುವ ಟ್ಯಾಕ್ಸಿ ಚಾಲಕರು ದಿನಕ್ಕೆ 3-4 ಸಾವಿರ ದುಡಿಯುತ್ತಿದ್ದರು, ಆಟೋ ಚಾಲಕರು ದಿನಕ್ಕೆ 800-1000 ದುಡಿಯುತ್ತಿದ್ದರು. ಆದರೆ, ಈಗ ಬಾಡಿಗೆಗಳೇ ಇಲ್ಲದಂತಾಗುತ್ತಿವೆ. ಈ ಎಫೆಕ್ಟ್ನಿಂದ ಚೇತರಿಸಿಕೊಳ್ಳಲು ಸಾಕಷ್ಟು ಸಮಯಾವಕಾಶ ಬೇಕಾಗಿದ್ದು, ಸಾಲ ಪಡೆದುಕೊಂಡಿರುವ ಬ್ಯಾಂಕ್ಗಳು ಸಾಲ ಮರುಪಾವತಿ ಸಮಯವನ್ನು ವಿಸ್ತರಣೆ ಮಾಡಬೇಕು ಎಂದು ಆಟೋ, ಟ್ಯಾಕ್ಸಿ ಚಾಲಕರು ಒತ್ತಾಯಿಸಿದ್ದಾರೆ.
ಮಾಲ್, ಚಿತ್ರಮಂದಿರಗಳಿಗೂ ತಟ್ಟಿದ ಬಿಸಿ: ನಗರದ ಹಲವಾರು ಮಾಲ್ಗಳಿಗೆ ಜನ ಬರಲು ಹಿಂದೇಟು ಹಾಕುತ್ತಿದ್ದು, ಕಳೆದ ಎರಡು ದಿನಗಳಿಂದ ಮಾಲ್ಗಳಲ್ಲಿ, ಚಲನಚಿತ್ರ ಮಂದಿರಗಳಲ್ಲಿ ಜನಸಂಖ್ಯೆ ಇಳಿಮುಖವಾಗಿರುವುದು ಕಂಡು ಬರುತ್ತಿದೆ. ಈ ಬಗ್ಗೆ ಮಾಲ್ ಹಾಗೂ ಚಿತ್ರಮಂದಿರಗಳ ಸಿಬ್ಬಂದಿ ಕೇಳಿದಾಗ ನೆಗಡಿ, ಕೆಮ್ಮು, ಶೀತ ಇರುವ ಜನ ಬರುವುದರಿಂದ ಸೊಂಕು ಹರಡುವ ಅವಕಾಶಗಳು ಹೆಚ್ಚಿದೆ. ಹಾಗಾಗಿ ಜನರು ಗಣನೀಯವಾಗಿ ಕಡಿಮೆ ಇದ್ದಾರೆ ಎಂದು ಹೇಳಿದ್ದಾರೆ.
ಮಾರುಕಟ್ಟೆಯನ್ನೂ ಬಿಡದ ಭೀತಿ: ಕೊರೋನ ವೈರಸ್ನ ಭೀತಿಯಿಂದ ನಗರದ ಕೆ.ಆರ್.ಮಾರುಕಟ್ಟೆ, ಶಿವಾಜಿನಗರ, ಯಲಹಂಕ, ಯಶವಂತಪುರ ಸೇರಿದಂತೆ ಅನೇಕ ಮಾರುಕಟ್ಟೆಗಳಲ್ಲಿ ತರಕಾರಿ ವಹಿವಾಟು ಕುಸಿತ ಕಂಡಿದೆ. ಮಾರುಕಟ್ಟೆಗಳಿಗೆ ಬರಬೇಕಾದ ಗ್ರಾಹಕರು ಯಾರೂ ಬರದೇ ಇರುವುದರಿಂದ ಬಿಕೋ ಎನ್ನುತ್ತಿವೆ. ಅಲ್ಲದೆ, ಹೊರ ರಾಜ್ಯಗಳಿಗೆ ರಫ್ತಾಗಬೇಕಾಗಿರುವ ತರಕಾರಿಗಳು ರಫ್ತು ಆಗುತ್ತಿಲ್ಲ.
ಬೀದಿ ಬದಿ ಮಾರಾಟ ನಿಷೇಧ: ನಗರದಲ್ಲಿ ಕೊರೋನ ಪ್ರಕರಣ ದೃಢಪಟ್ಟ ಬಳಿಕ ಆತಂಕಗೊಂಡಿರುವ ಪಾಲಿಕೆಯು ರಸ್ತೆ ಬದಿ ತೆರೆದಿಟ್ಟ ಆಹಾರ ಪದಾರ್ಥ ಮಾರಾಟ ಮಾಡುವುದನ್ನು ನಿಷೇಧಿಸಲು ಆದೇಶಿಸಿದೆ. ರಸ್ತೆ ಬದಿ ತೆರೆದಿಟ್ಟ ಆಹಾರ, ಬಣ್ಣದ ನೀರಿನ ಪಾನೀಯ ಹಾಗೂ ಕತ್ತರಿಸಿಟ್ಟ ಹಣ್ಣು ಮಾರಾಟ ಮಾಡದಂತೆ ತಡೆಗಟ್ಟಬೇಕು. ಆಹಾರ ತಯಾರಿಸುವ ಸ್ಥಳ ಮತ್ತು ಆಹಾರ ಪದಾರ್ಥ ಸಂಗ್ರಹಿಸುವ ಸ್ಥಳದಲ್ಲಿನ ಸ್ವಚ್ಛತೆ ಕಾಪಾಡುವುದು. ಹೊಟೇಲ್, ರೆಸ್ಟೋರೆಂಟ್ಗಳಲ್ಲಿ ಬಿಸಿ ನೀರು ಸಿಗಲಿದೆ ಎಂಬ ನಾಮಫಲಕ ಅಳವಡಿಸಿಕೊಳ್ಳುವುದು, ಸ್ವಚ್ಛತೆ ಕಾಪಾಡಿಕೊಳ್ಳುವುದು ಕಡ್ಡಾಯ ಎಂದು ಆದೇಶದಲ್ಲಿ ಹೇಳಲಾಗಿದೆ.
ಆರೋಗ್ಯಾಧಿಕಾರಿಗಳ ತಪಾಸಣೆ: ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಶಾಂತಿನಗರ, ನಂಜಪ್ಪ ವೃತ್ತ, ವಿಜಯನಗರ, ಚಿಕ್ಕಪೇಟೆ, ಜಯನಗರ ಸೇರಿದಂತೆ ಹಲವು ಕಡೆ ಪಾದಚಾರಿ ಮಾರ್ಗದಲ್ಲಿ ಹಣ್ಣು ಮಾರಾಟ ಮಾಡುತ್ತಿದ್ದ ಮಳಿಗೆ, ಹೊಟೇಲ್ ಸೇರಿದಂತೆ ವಿವಿಧ ಕಡೆ ಪಾಲಿಕೆ ಆರೋಗ್ಯಾಧಿಕಾರಿಗಳು ದಾಳಿ ನಡೆಸಿದ್ದು, ಪಾದಚಾರಿ ಮಾರ್ಗದಲ್ಲಿ ಆಹಾರ ಮಾರಾಟ ಮಾಡದಂತೆ ಸೂಚನೆ ನೀಡಿ ತೆರವುಗೊಳಿಸಿದ್ದಾರೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸ್ ಸಿಬ್ಬಂದಿಗೆ ಎಚ್ಚರಿಕೆ
ಕೊರೋನ ವೈರಸ್ ಕುರಿತು ಪೊಲೀಸ್ ಸಿಬ್ಬಂದಿ ಎಚ್ಚರಿಕೆ ವಹಿಸುವಂತೆ ಸರಕಾರದ ಮುಖ್ಯಕಾರ್ಯದರ್ಶಿಗಳು ಸಭೆ ನಡೆಸಿ ಮುನ್ನೆಚ್ಚರಿಕಾ ಕ್ರಮಗಳನ್ನು ಸೂಚಿಸಲಾಗಿದೆ. ಪೊಲೀಸರು ಜನರೊಂದಿಗೆ ಸದಾ ಬೆರೆಯುತ್ತಿರುತ್ತಾರೆ. ಹೀಗಾಗಿ ಪೊಲೀಸರು ಜನರೊಂದಿಗೆ ಮಾತನಾಡುವಾಗ ಮಾಸ್ಕ್ ಧರಿಸುವುದರ ಜತೆಗೆ ಅಂತರ ಕಾಯ್ದುಕೊಳ್ಳಬೇಕು. ಠಾಣೆಯಲ್ಲಿ ಶುಚಿತ್ವ ಕಾಪಾಡಲು ಪೊಲೀಸರಿಗೆ ಅಗತ್ಯ ವಸ್ತುಗಳನ್ನು ಠಾಣಾ ವೆಚ್ಚದಲ್ಲಿಯೇ ಒದಗಿಸಲಾಗುತ್ತದೆ. ಪೊಲೀಸರು ಕೊರೋನ ಪತ್ತೆ ಅಥವಾ ಅನಾರೋಗ್ಯಕ್ಕೊಳಗಾದರೆ ಅಂತಹವರಿಗೆ ರಜೆ ಕೊಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಮೊದಲು ಪ್ರತಿದಿನ 1500 ರೂ. ಗೂ ಅಧಿಕ ಹಣ ಸಂಪಾದಿಸುತ್ತಿದ್ದೆ. ಆದರೀಗ ಕೇವಲ 300 ರೂ. ಮಾತ್ರ ಸಂಪಾದನೆಯಾಗುತ್ತಿದೆ. ಪ್ರಯಾಣಿಕರ ಸಂಖ್ಯೆ ತೀವ್ರಗತಿಯಲ್ಲಿ ಕಡಿಮೆಯಾಗಿದೆ. ಇದೇ ರೀತಿ ಮುಂದುವರಿದರೆ ಬಹಳಷ್ಟು ತೊಂದರೆಯಾಗಲಿದೆ. ಈ ಬಗ್ಗೆ ಸರಕಾರ ಜಾಗೃತಿ ಮೂಡಿಸಬೇಕು. ಕೊರೋನ ವೈರಸ್ಗೆ ಪರಿಹಾರ ಕಂಡುಕೊಳ್ಳಬೇಕು. ಇಲ್ಲವಾದರೆ ನಮ್ಮ ಜೀವನ ಅತಂತ್ರವಾಗಲಿದೆ.
-ನಾಗರಾಜು, ಆಟೋ ಚಾಲಕ
‘ಪ್ರತಿಭಟನೆ ಮುಂದೂಡಿ'
ನಗರದಲ್ಲಿ ಕೊರೋನ ಸೋಂಕು ಹರಡಿರುವುದರಿಂದ ಕೆಲವು ದಿನಗಳ ಕಾಲ ಎಲ್ಲ ಸಂಘಟನೆಗಳು, ಪಕ್ಷಗಳು ತಮ್ಮ ಹೋರಾಟಗಳನ್ನು ಮುಂದೂಡಬೇಕು. ಈ ಮೂಲಕ ಪ್ರತಿಭಟನೆಯ ಹಕ್ಕು ಕಸಿಯುವ ಉದ್ದೇಶವಿಲ್ಲ. ಪ್ರತಿಭಟನೆಗಳಲ್ಲಿ ನೂರಾರು ಜನರು ಸೇರುವುದರಿಂದ ಸೋಂಕು ಹರಡುವ ಸಾಧ್ಯತೆಯಿರುತ್ತದೆ.
-ಭಾಸ್ಕರ್ ರಾವ್, ಬೆಂಗಳೂರು ನಗರ ಪೊಲೀಸ್ ಆಯುಕ್ತ