'ಹೋಂ ಕ್ವಾರಂಟೈನ್' ನಿಯಮ ಪಾಲಿಸದಿದ್ದರೆ ಬಂಧನ: ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಎಚ್ಚರಿಕೆ
ಬೆಂಗಳೂರು, ಮಾ.23: ಕೊರೋನ ವೈರಸ್ ಹಿನ್ನೆಲೆ ಶಂಕಿತರು ಹೋಂ ಕ್ವಾರಂಟೈನ್(ಆರೋಗ್ಯಕ್ಕಾಗಿ ಪ್ರತ್ಯೇಕ ವಾಸ)ಗಳು ನಿಯಮ ಪಾಲಿಸದೆ ಸಾರ್ವಜನಿಕರೊಂದಿಗೆ ಓಡಾಟ ನಡೆಸಿದರೆ, ಕಾನೂನು ಕ್ರಮ ಜರುಗಿಸಿ, ಬಂಧಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಸೋಮವಾರ ಟ್ವಿಟ್ ಮಾಡಿರುವ ಅವರು, ಸಾರ್ವಜನಿಕರ ಹಿತದೃಷ್ಟಿಯಿಂದ ನಗರದಲ್ಲಿ 5,000 ಮಂದಿಗೆ ಮನೆಯಲ್ಲೇ ಪ್ರತ್ಯೇಕವಾಗಿ ಇರುವಂತೆ ಕೈ ಮೇಲೆ ಸ್ಟ್ಯಾಂಪ್ ಹಾಕಲಾಗಿದೆ. ಆದರೆ, ಸ್ಟ್ಯಾಂಪ್ ಹಾಕಿಸಿಕೊಂಡಿರುವ ವ್ಯಕ್ತಿಗಳು ಮುಲಾಜಿಲ್ಲದೆ ಬಸ್ಗಳಲ್ಲಿ, ಹೊರಗಡೆ ಓಡಾಡುತ್ತಿದ್ದಾರೆಂದು ತಮಗೆ ಕರೆಗಳು ಬರುತ್ತವೆ ಎಂದು ತಿಳಿಸಿದ್ದಾರೆ.
ಇನ್ನು ಮುಂದೆ ಈ ರೀತಿ ಸ್ಟ್ಯಾಂಪ್ ಉಳ್ಳವರು ಯಾರಾದರೂ ಹೊರಗಡೆ ಓಡಾಡುವುದು ಕಂಡು ಬಂದರೆ ಸಹಾಯವಾಣಿ 100ಗೆ ಕರೆ ಮಾಡಿ ಮಾಹಿತಿ ನೀಡಿ. ಅಂತವರನ್ನು ಬಂಧಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
Next Story