ಕೊರೋನ ಭೀತಿಯ ನಡುವೆಯೂ ಲಾಕ್ಡೌನ್ಗೆ ಜನರ ನಿರಾಸಕ್ತಿ !
ಬೆಂಗಳೂರು, ಮಾ.23: ರಾಜ್ಯದಲ್ಲಿ ಕೊರೋನ ನಿಯಂತ್ರಿಸುವ ಸಲುವಾಗಿ ರಾಜ್ಯ ಸರಕಾರ ಸೋಮವಾರದಿಂದ ಬೆಂಗಳೂರು ನಗರ ಸೇರಿದಂತೆ 9 ಜಿಲ್ಲೆಗಳಲ್ಲಿ ಲಾಕ್ಡೌನ್ ಘೋಷಿಸಿದ್ದರೂ, ಜನರು ನಿರಾಸಕ್ತಿ ತೋರಿದ್ದಾರೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಕಲಬುರಗಿ, ಕೊಡಗು, ಮೈಸೂರು ಜಿಲ್ಲೆಗಳಲ್ಲಿ ಅಲ್ಲಲ್ಲಿ ಲಾಕ್ಡೌನ್ ಆಗಿದ್ದಂತೆ ಕಂಡರೂ, ಜನರು ಸಾಕಷ್ಟು ಬೆಂಬಲ ವ್ಯಕ್ತಪಡಿಸಿಲ್ಲ. ಆದರೆ, ಬೆಳಗಾವಿ ಜಿಲ್ಲೆಯಲ್ಲಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಸಾಕಷ್ಟು ಕಡೆ ಲಾಕ್ ಡೌನ್ ಆಗಿದ್ದದ್ದು ಕಂಡುಬಂದಿತು.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಸಚಿವ ಸಂಪುಟದೊಂದಿಗೆ ಚರ್ಚಿಸಿ ಇಡೀ ರಾಜ್ಯವನ್ನು ಲಾಕ್ ಡೌನ್ ಮಾಡಲು ಚಿಂತನೆ ನಡೆಸಲಾಗುತ್ತಿದೆ ಎಂದಿದ್ದರು. ರವಿವಾರ 9 ಜಿಲ್ಲೆಗಳ ಲಾಕ್ಡೌನ್ ಘೋಷಿಸಿದ್ದರೂ, ಸ್ಥಳೀಯ ಜಿಲ್ಲಾಡಳಿತಗಳು ಸರಿಯಾಗಿ ಇದಕ್ಕೆ ಸ್ಪಂದಿಸಿಲ್ಲ. ಆದುದರಿಂದಾಗಿ, ಲಾಕ್ಡೌನ್ ಆಗದಿರುವುದು ಕಂಡುಬಂದಿದೆ.