ನಗರದಲ್ಲಿ ಓಡಾಡುತ್ತಿದ್ದ ಕ್ವಾರೆಂಟೈನ್ ಮುದ್ರೆ ಹಾಕಿದ್ದ ವ್ಯಕ್ತಿ ವಿರುದ್ಧ ದೂರು ದಾಖಲು
ಸಾಂದರ್ಭಿಕ ಚಿತ್ರ
ಬೆಂಗಳೂರು, ಮಾ.26: ಕೊರೋನ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮನೆಯಲ್ಲಿ ಪ್ರತ್ಯೇಕವಾಗಿರಲು ಸೂಚಿಸಿ ಮುದ್ರೆ ಹಾಕಿದರೂ ಓಡಾಡುತ್ತಿದ್ದ ವ್ಯಕ್ತಿಯನ್ನು ಗಮನಿಸಿದ ಮೆಡಿಕಲ್ ಶಾಪ್ ಮಾಲಕರೊಬ್ಬರು ಆತನ ವಿರುದ್ಧ ಪೊಲೀಸರಿಗೆ ದೂರು ನೀಡಿರುವ ಘಟನೆ ನಗರದ ಬನಶಂಕರಿಯಲ್ಲಿ ನಡೆದಿದೆ.
ಇತ್ತೀಚೆಗೆ ವಿದೇಶದಿಂದ ವಾಪಸ್ ಆಗಿದ್ದ ವ್ಯಕ್ತಿಯೊಬ್ಬನಿಗೆ ಹೋಂ ಕ್ಯಾರಂಟೈನ್ನಲ್ಲಿರಲು ಕಟ್ಟುನಿಟ್ಟಾಗಿ ಸೂಚಿಸಲಾಗಿತ್ತು. ಆದರೂ ಆತ ಪದೇ ಪದೇ ಮೆಡಿಕಲ್ ಶಾಪ್ಗೆ ಬರುತ್ತಿದ್ದ. ಈ ಹಿನ್ನೆಲೆ ಆತನ ವಿರುದ್ಧ ಬನಶಂಕರಿ ಠಾಣೆಯಲ್ಲಿ ದೂರು ದಾಖಲಾಗಿದೆ.
ಹೋಂ ಕ್ವಾರೆಂಟೈನ್ ನಲ್ಲಿರುವ ವ್ಯಕ್ತಿ ಉಕ್ರೇನ್ನಲ್ಲಿ ಮೆಡಿಕಲ್ ವಿದ್ಯಾಬ್ಯಾಸ ಮಾಡುತ್ತಿದ್ದ. 3ನೇ ವರ್ಷದ ವ್ಯಾಸಂಗ ಮಾಡುತ್ತಿದ್ದ ಈತ ಮಾ.21ರಂದು ನಗರಕ್ಕೆ ಆಗಮಿಸಿದ್ದ. ಏರ್ ಪೋರ್ಟ್ನಲ್ಲಿ ಆತನ ಕೈಗೆ ಕ್ವಾರೆಂಟೈನ್ ಸೀಲ್ ಹಾಕಲಾಗಿತ್ತು. ಆದರೂ ಆತ ಪದೇ ಪದೇ ಹೊರಗೆ ಓಡಾಡುತ್ತಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆತನ ವಿರುದ್ಧ ಮೆಡಿಕಲ್ ಶಾಪ್ ಮಾಲಕರು ಪೊಲೀಸರಿಗೆ ದೂರು ನೀಡಿದ್ದು ಐಪಿಸಿ ಸೆಕ್ಷನ್ 268 ಹಾಗು 270ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.