ಬಿಎಸ್ವೈ ಸಭೆಯಲ್ಲಿ ಡಿಸಿಎಂ ಅಶ್ವತ್- ಭಾಸ್ಕರ್ ರಾವ್ ನಡುವೆ ಜಟಾಪಟಿ ?
ಕಣ್ಣೀರಿಟ್ಟು ಸಭೆಯಿಂದ ಹೊರನಡೆದ ಪೊಲೀಸ್ ಆಯುಕ್ತ
ಭಾಸ್ಕರ್ ರಾವ್- ಅಶ್ವಥ್ ನಾರಾಯಣ
ಬೆಂಗಳೂರು, ಮಾ.26: 'ಹಣ ಪಡೆದು ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗುತ್ತಿದೆ' ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ಹಾಗೂ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ನಡುವೆ ಜಟಾಪಟಿ ನಡೆದಿದೆ ಎಂದು ಹೇಳಲಾಗುತ್ತಿದೆ.
ಗುರುವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ವಿಡಿಯೋ ಕಾನ್ಫರೆನ್ಸ್ ವೇಳೆ ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ಮಾತನಾಡುತ್ತಾ, ಬೃಹತ್ ಮಳಿಗೆ ಮತ್ತು ಗಿರಣಿ ಅಂಗಡಿ ಮಾಲಕರಿಂದ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಹಣ ಪಡೆದು, ಅಂಗಡಿ ತೆರೆಯಲು ಅವಕಾಶ ನೀಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, ಸ್ವಿಗ್ಗಿ ಸೇರಿದಂತೆ ಇತರೆ ಆಹಾರ ವಿತರಣೆ ಮಾಡುವವರಿಗೆ ಹೆಚ್ಚು ಪಾಸ್ ಕೊಡುತ್ತಿಲ್ಲ ಏಕೆ ಎಂದು ಅಶ್ವಥ್ ನಾರಾಯಣ ಸಭೆಯಲ್ಲಿ ಆಯುಕ್ತರನ್ನು ಪ್ರಶ್ನಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದಕ್ಕೆ ಉತ್ತರಿಸಿದ ಭಾಸ್ಕರ್ ರಾವ್, ಹೆಚ್ಚು ಪಾಸ್ ಕೊಡುವುದಕ್ಕೆ ಆಗುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ, ಈ ಕೂಡಲೇ ನನ್ನನ್ನು ಆಯುಕ್ತರ ಹುದ್ದೆಯಿಂದ ಬಿಡುಗಡೆ ಮಾಡಿ ಎಂದು ಮುಖ್ಯಮಂತ್ರಿ ಬಳಿ ಮನವಿ ಮಾಡಿದರು ಎಂದು ಮೂಲಗಳು ತಿಳಿಸಿವೆ.
ಈ ವೇಳೆ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಭಾಸ್ಕರ್ ರಾವ್ ರನ್ನು ಸಮಾಧಾನ ಪಡಿಸಲು ಯತ್ನಿಸಿದರು. ಆದರೆ ಭಾಸ್ಕರ್ ರಾವ್ ಅವರು ಕಣ್ಣೀರಿಡುತ್ತಲೇ ಸಭೆಯಿಂದ ಹೊರನಡೆದರು ಎಂದು ತಿಳಿದುಬಂದಿದೆ.