ಪೂರ್ಣ ಪ್ರಮಾಣದ ವೈರಾಲಜಿ ಲ್ಯಾಬ್ ಸಿದ್ಧ: ಶಾಸಕ ಡಾ. ಭರತ್ ಶೆಟ್ಟಿ
ಕನಿಷ್ಠ ದಿನಕ್ಕೆ 100 ಮಾದರಿಗಳ ಪರೀಕ್ಷೆ ಸಾಧ್ಯ
ಮಂಗಳೂರು, ಎ.2: ನಗರದ ವೆನ್ಲಾಕ್ನಲ್ಲಿ ಪೂರ್ಣ ಪ್ರಮಾಣದ ವೈರಾಲಜಿ ಲ್ಯಾಬ್ (ಸದ್ಯ ಇಲ್ಲಿ ಕೋವಿಡ್ ಸೋಂಕಿಗೆ ಸಂಬಂಧಿಸಿದ ಮಾದರಿಗಳ ಪರೀಕ್ಷೆ) ಸಿದ್ಧಗೊಂಡಿದ್ದು, ಇಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಯುತ್ತಿದೆ ಎಂದು ಶಾಸಕ ಡಾ. ಭರತ್ ಶೆಟ್ಟಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಅವರು, ಪ್ರಾಯೋಗಿಕ ಪರೀಕ್ಷೆಯಲ್ಲಿ ಸಫಲವಾದಲ್ಲಿ ಐಸಿಎಂಆರ್ನಿಂದ ಅನುಮತಿ ದೊರೆಯಲಿದ್ದು, ಬಳಿಕ ಮಂಗಳೂರಿನಲ್ಲಿಯೇ ಕೋವಿಡ್ ಸೇರಿದಂತೆ ಎಲ್ಲಾ ರೀತಿಯ ವೈರಾಣುಗಳಿಗೆ ಸಂಬಂಧಿಸಿದ ಮಾದರಿಗಳ ಪರೀಕ್ಷೆ ನಡೆಯಲಿದೆ ಎಂದರು.
ಪ್ರಸ್ತುತ ಈ ಲ್ಯಾಬನ್ನು ಕೋವಿಡ್ ಪ್ರಕರಣಗಳ ಮಾದರಿಗಳ ಪರೀಕ್ಷೆಗಾಗಿ ಬಳಸಲಾಗುವುದು. ಒಂದು ದಿನದಲ್ಲಿ 100 ಮಾದರಿಗಳ ಪರೀಕ್ಷೆಯನ್ನು ಮಾಡಬಹುದಾಗಿದೆ ಎಂದು ಅವರು ತಿಳಿಸಿದರು.
ವೆನ್ಲಾಕ್ನಲ್ಲಿ ಕೊರೋನ ಸೋಂಕಿತರಿಗೆ 100 ಬೆಡ್ಗಳ ವ್ಯವಸ್ಥೆ ಮಾಡಲಾಗಿದ್ದು, 15 ಐಸಿಯುಗಳ ವ್ಯವಸ್ಥೆ ಇದೆ. ಅಗತ್ಯವಿದ್ದಲ್ಲಿ ಖಾಸಗಿ ಮೆಡಿಕಲ್ ಕಾಲೇಜುಗಳ ಆಸ್ಪತ್ರೆಯನ್ನು ಬಳಸಿಕೊಳ್ಳಲಾಗುವುದು. ಕೋವಿಡ್ ಚಿಕಿತ್ಸೆಗೆ ಸಂಬಂಧಿಸಿ ಸದ್ಯ 7000 ಅಗತ್ಯ ಕಿಟ್ಗಳು ಸಿದ್ಧವಿದೆ ಎಂದು ಅವರು ಹೇಳಿದರು.
ವೆನ್ಲಾಕ್, ಜಿಲ್ಲೆಯ ನಾಲ್ಕು ತಾಲೂಕು ಆಸ್ಪತ್ರೆ ಹಾಗೂ 8 ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ಫ್ಲೂ ಕ್ಲಿನಿಕ್ ಆರಂಭಿಸಲಾಗಿದೆ. ವೆನ್ಲಾಕ್ನ ನೂತನ ಬ್ಲಾಕನ್ನು ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುವ ಸೌಲಭ್ಯದ ವ್ಯವಸ್ಥೆ ಮಾಡಲಾಗುತ್ತಿದೆ. ಇದು ಸಿದ್ಧವಾದ ಬಳಿಕ ಆಯುಷ್ ಬ್ಲಾಕ್ನಲ್ಲಿರುವ ಕೋವಿಡ್ ಸೋಂಕಿತರನ್ನು ಆಸ್ಪತ್ರೆಯ ಎರಡನೆ ಮತ್ತು 3ನೆ ಮಹಡಿಯ ಸುಸಜ್ಜಿತ ಬ್ಲಾಕ್ಗೆ ಸ್ಥಳಾಂತರಿಸಲಾಗುವುದು. ಬಳಿಕ ಆಯುಷ್ ಬ್ಲಾಕನ್ನು ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರು ಹಾಗೂ ಸಿಬ್ಬಂದಿಯನ್ನು ಕ್ವಾರಂಟೈನ್ಗೊಳಪಡಿಸುವ ವ್ಯವಸ್ಥೆಗೆ ಮೀಸಲಿಡಲಾಗುವುದು. ಕೊರೋನ ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರು ಹಾಗೂ ಸಿಬ್ಬಂದಿಯನ್ನು ನಿಗದಿತ ಅವಧಿಯ ಬಳಿಕ ಕ್ವಾರಂಟೈನಲ್ಲಿಟ್ಟು ವಿಶ್ರಾಂತಿ ನೀಡಬೇಕಾಗುತ್ತದೆ. ಇದೇ ವೇಳೆಹಳೆ ವೆನ್ಲಾಕ್ ಆಸ್ಪತ್ರೆಯನ್ನು ಅಗತ್ಯವಿದ್ದಲ್ಲಿ ಕೊರೋನ ಸೋಂಕಿತರ ಚಿಕಿತ್ಸೆಗಾಗಿ ಸಿದ್ಧಗೊಳಿಸಲಾಗುತ್ತಿದೆ ಎಂದು ಡಾ. ಭರತ್ ಶೆಟ್ಟಿ ತಿಳಿಸಿದರು.
ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಮನಪಾ ಹಾಗೂ ಜಿಲ್ಲಾಡಳಿತದ ವತಿಯಿಂದ ನಗರ ವ್ಯಾಪ್ತಿಯ 1600 ಮಂದಿಗೆ ರೇಶನ್ ಕಿಟ್ ವಿತರಿಸಲಾಗಿದೆ ಎಂದು ಅವರು ಹೇಳಿದರು.
ಇದಲ್ಲದೆ ನಿನ್ನೆಯವರೆಗೆ ತಮ್ಮ ಕಾರ್ಯಕರ್ತರ ಸಹಕಾರದಲ್ಲಿ 1700 ಕಿಟ್, 1000 ಮಾಸ್ಕ್ ಹಾಗೂ 100 ಸ್ಯಾನಿಟೈಸರ್ಗಳನ್ನು ವಿತರಿಸಲಾಗಿದೆ. ಜಿಲ್ಲಾಡಳಿತದಿಂದ ತಮ್ಮ ವ್ಯಾಪ್ತಿಯ ಗ್ರಾಮಾಂತರ ಪ್ರದೇಶಕ್ಕೂ ರೇಶನ್ ಕಿಟ್ ವಿತರಿಸುವ ಕಾರ್ಯ ನಡೆಯಲಿದೆ. ಹೋಂ ಡೆಲಿವರಿ ವ್ಯವಸ್ಥೆ ಮಾಡುವವರಿಗೆ ಪಾಸ್ ನೀಡಲಾಗಿದ್ದು, ಮಧ್ಯಾಹ್ನ 12 ಗಂಟೆಯಿಂದ ಅವರು ಮನೆಗಳಿಗೆ ಅಗತ್ಯ ಸಾಮಗ್ರಿಗಳನ್ನು ತಲುಪಿಸುವ ವ್ಯವಸ್ಥೆ ಮಾಡಲಿದ್ದಾರೆ. ನಗರ ವ್ಯಾಪ್ತಿಯ ಬಳಿಕ ತಮ್ಮ ವ್ಯಾಪ್ತಿಯ 13 ಗ್ರಾ.ಪಂ.ಗಳಲ್ಲಿಯೂ ಈ ವ್ಯವಸ್ಥೆ ಮಾಡಲಾಗುವುದು ಎಂದು ಅವರು ಹೇಳಿದರು.
ಕೇರಳ ಗಡಿ ನಿರ್ಬಂಧಕ್ಕೆ ಸಂಬಂಧಿಸಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಈ ಕುರಿತಂತೆ ಮುಂದಿನ ಹೆಜ್ಜೆಗೆ ರಾಜ್ಯ ಸರಕಾರ ಕ್ರಮ ಕೈಗೊಳ್ಳುತ್ತಿದೆ. ನಮ್ಮ ರಾಜ್ಯದೊಳಗೆ ಕೇರಳದಿಂದ ಯಾವುದೇ ತೆರನಾದ ರೋಗಿಗೆ ಬರಲು ಅವಕಾಶವಿಲ್ಲ. ರಾಜ್ಯದ ಜನರು ಹಾಗೂ ರೋಗಿಗಳ ಬಗ್ಗೆ ನಾವು ಗಮನ ಹರಿಸಬೇಕಾಗಿರುವುದರಿಂದ ಈ ನಿಟ್ಟಿನಲ್ಲಿ ಕಠಿಣ ಕ್ರಮ ಅಗತ್ಯವಾಗಿದೆ. ತಲಪಾಡಿ ಗ್ರಾ ಪಂನಲ್ಲಿಯೂ ಈ ಬಗ್ಗೆ ನಿರ್ಣಯ ವಹಿಸಲಾಗಿದೆ. ಇದಲ್ಲದೆ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರು ಅಪಾಯಕಾರಿ ಕಾಯಿಲೆಗಳ ನಿಯಂತ್ರಣ ಮತ್ತು ಹರಡುವಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೆಎಂಸಿ (ಕರ್ನಾಟಕ ಮುನ್ಸಿಪಲ್ ಕಾರ್ಪೊರೇಶನ್) ಕಾಯ್ದೆ 1976ರ ಸೆಕ್ಷನ್ 58(22)ರಡಿ ಇಂತಹ ಸೋಂಕು ಹೊಂದಿರುವವರು ಅಥವಾ ಶಂಕಿತರನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಅಂತಹ ರೋಗಿಗಳು ಹಾಗೂ ಅವರನ್ನು ಕೊಂಡೊಯ್ಯುವ ವಾಹನಗಳನ್ನು ನಿರ್ಬಂಧಿಸಿ ಆದೇಶ ಹೊರಡಿಸಿದ್ದಾರೆ ಎಂದು ಶಾಸಕ ಡಾ. ಭರತ್ ಶೆಟ್ಟಿ ತಿಳಿಸಿದರು.
ಗೋಷ್ಠಿಯಲ್ಲಿ ಮೇಯರ್ ದಿವಾಕರ ಪಾಂಡೇಶ್ವರ, ಉಪ ಮೇಯರ್ ವೇದಾವತಿ, ಸ್ಥಾಯಿಸಮಿತಿ ಅಧ್ಯಕ್ಷರಾದ ಶರತ್, ಕಿರಣ್ ಕುಮಾ್, ಜಗದೀಶ್ ಶೆಟ್ಟಿ ಉಪಸ್ಥಿತರಿದ್ದರು.