ಹರಿದ್ವಾರದಲ್ಲಿ ಸಿಲುಕಿಕೊಂಡಿರುವ 1,800 ಯಾತ್ರಾರ್ಥಿಗಳು: ವಾಪಸ್ ಕರೆತರಲು 28 ಬಸ್ ಗಳ ವ್ಯವಸ್ಥೆ
ಲಾಕ್ ಡೌನ್
ಅಹ್ಮದಾಬಾದ್: ಕೊರೋನ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ದೇಶಾದ್ಯಂತ ಲಾಕ್ ಡೌನ್ ವಿಧಿಸಿದ ಹಿನ್ನೆಲೆಯಲ್ಲಿ ತಮ್ಮ ತವರು ರಾಜ್ಯ ಗುಜರಾತ್ ಗೆ ವಾಪಸಾಗಲು ಸಾಧ್ಯವಾಗದೆ ಉತ್ತರಾಖಂಡದ ಹರಿದ್ವಾರದಲ್ಲಿ 1,800 ಮಂದಿ ಸಿಲುಕಿಕೊಂಡಿದ್ದಾರೆ. ಈ ಯಾತ್ರಾರ್ಥಿಗಳನ್ನು ಶನಿವಾರ ರಾತ್ರಿಯೊಳಗಾಗಿ 28 ಬಸ್ಸುಗಳಲ್ಲಿ ವಾಪಸ್ ಅಹ್ಮದಾಬಾದ್ಗೆ ಕರೆತರಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುಜರಾತ್ ಸರಕಾರವೇ ಈ ಬಸ್ಸುಗಳ ಏರ್ಪಾಟು ಮಾಡಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರ ಮುತುವರ್ಜಿಯಿಂದ ಈ ಏರ್ಪಾಟು ಮಾಡಲು ಸಾಧ್ಯವಾಗಿದೆ ಎಂದು ಮುಖ್ಯಮಂತ್ರಿಗಳ ಕಾರ್ಯದರ್ಶಿ ಅಶ್ವನಿ ಕುಮಾರ್ ತಿಳಿಸಿದ್ದಾರೆ.
ಗುಜರಾತ್ ಗಡಿಯಲ್ಲಿ ಎಲ್ಲರ ಆರೋಗ್ಯ ತಪಾಸಣೆ ನಡೆಸಿ ನಂತರ ಅಹ್ಮದಾಬಾದ್ ನಿಂದ ಅವರವರ ಜಿಲ್ಲೆಗಳಿಗೆ ಅವರನ್ನು ತಲುಪಿಸಲಾಗುವುದು. ಹರಿದ್ವಾರ್ ನಲ್ಲಿ ಸಿಲುಕಿರುವವರಲ್ಲಿ ವಡೋದರ, ಸೂರತ್, ರಾಜಕೋಟ್, ಖೇಡಾ, ಜಾಮ್ನಗರ್ ಹಾಗೂ ಭಾವ್ನಗರ್ ಜಿಲ್ಲೆಯವರು ಸೇರಿದ್ದಾರೆ.
Next Story